ಕಾರ್ಕಳ : ಪ.ಪೂ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ಪ್ರವೇಶ ನಿಷೇಧ ಹೇರಿರುವ ಸರ್ಕಾರದ ನಿರ್ಧಾರವನ್ನು ಹಿಂದು ರಾಷ್ಟ್ರ ಸಮನ್ವಯ ಸಮಿತಿಯವರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸಮಿತಿಯ ಪ್ರತಿನಿಧಿಗಳು ಕಾರ್ಕಳ ತಾಲೂಕು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ತಕ್ಷಣ ಕ್ರಮ ಜರುಗಿಸಲು ಮನವಿಯನ್ನು ಸಲ್ಲಿಸಿದರು.
ಸಮಿತಿಯ ಹೇಳಿಕೆ ಪ್ರಕಾರ, ಸಮಾಜ ಪರಿವರ್ತನೆ, ಶಿಕ್ಷಣ, ಗೋಸಂರಕ್ಷಣೆ ಮತ್ತು ಕೃಷಿ ಪುನರುಜ್ಜೀವನ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಸ್ವಾಮೀಜಿಯವರ ಮೇಲೆ ರಾಜಕೀಯ ಕಾರಣಗಳಿಂದ ನಿಷೇಧ ಹೇರಿರುವುದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ. ಈ ನಿಷೇಧವನ್ನು ರದ್ದುಪಡಿಸಲು ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಮನವಿಯಲ್ಲಿ ಇದರ ಜೊತೆಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರನ್ನು ಅಮಾನತು ಮಾಡಿರುವುದು ಅಧಿಕಾರದ ದುರ್ಬಳಕೆ ಎಂದು ಸಮಿತಿ ಉಲ್ಲೇಖಿಸಿದೆ. ಕೇಂದ್ರದ DOPT ಮಾರ್ಗಸೂಚಿಯ ಪ್ರಕಾರ ಸಾಮಾಜಿಕ ಸಂಸ್ಥೆಗಳಲ್ಲಿ ಭಾಗವಹಿಸುವುದಕ್ಕೆ ನಿಷೇಧ ಇಲ್ಲದಿದ್ದರೂ, ಎರಡು ನೌಕರರಿಗೆ ಅಮಾನತು ವಿಧಿಸಿರುವುದು ಅಸಂವಿಧಾನಿಕ ಎಂದು ಸಮಿತಿ ತಿಳಿಸಿದೆ.
ಸ್ವಾಮೀಜಿಯವರ ಮೇಲಿನ ನೋಟಿಸ್ ಹಿಂತೆಗೆದುಕೊಳ್ಳುವುದು, ಸಂಘದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು, ಹಾಗೂ ಅಮಾನತು ಆದೇಶಗಳನ್ನು ರದ್ದುಪಡಿಸುವುದು ಸೇರಿದಂತೆ ಐದು ಬೇಡಿಕೆಗಳನ್ನು ಸಮಿತಿ ರಾಜ್ಯಪಾಲರಿಗೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರು ಹಾಗೂ ಧರ್ಮ ಪ್ರೇಮಿಗಳು ಭಾಗಿಯಾಗಿದ್ದರು.

