ಸೋಮನಾಥೇಶ್ವರ ಸಂಜೀವಿನಿ ಒಕ್ಕೂಟ ಕ್ರಿಯಾಶೀಲತೆಗೆ ಶ್ಲಾಘನೆ

0
21

ವರದಿ ರಾಯಿ ರಾಜ ಕುಮಾರ

ಮೂಡುಬಿದರೆ ತಾಲೂಕಿನ ದರೆಗುಡ್ಡೆಯ ಸೋಮನಾಥೇಶ್ವರ ಸಂಜೀವಿನಿ ಮಾದರಿ ಒಕ್ಕೂಟ ತನ್ನ ಕ್ರಿಯಾಶೀಲತೆಯ ಮೂಲಕ ನಿಜಾರ್ಥದಲ್ಲಿಯೂ ಮಾದರಿಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದು ದರೆಗುಡ್ಡೆ ಗ್ರಾಮಪಂಚಾಯತ್‌ನ ನಿರ್ಗಮನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.

ದರೆಗುಡ್ಡೆ ಗ್ರಾಮಪಂಚಾಯತ್ ಮಟ್ಟದ ಸೋಮನಾಥೇಶ್ವರ ಸಂಜೀವಿನಿ ಮಾದರಿ ಒಕ್ಕೂಟದ ವತಿಯಿಂದ ಮಂಗಳವಾರ ಗ್ರಾಮಪಂಚಾಯತ್‌ನ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಮಹಿಳೆಯರು ಹೆಚ್ಚು ಕ್ರಿಯಾಶೀಲರಾದಷ್ಟೂ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಒಕ್ಕೂಟದ ಚಟುವಟಿಕೆಗಳನ್ನು ಶ್ಲಾಘಿಸಿದರು.

ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಪಂಚಾಯತ್ ಆಡಳಿತದಿಂದ ಲಭಿಸಿದ ಸರ್ವ ರೀತಿಯ ಸಹಕಾರದಿಂದ ಒಕ್ಕೂಟವು ಸುಸಜ್ಜಿತ ಕಟ್ಟಡದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಮುಂದಿನ ದಿನಗಳಲ್ಲಿಯೂ ಒಕ್ಕೂಟ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಪಂಚಾಯತ್‌ನ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ, ಉಪಾಧ್ಯಕ್ಷೆ ನಳಿನಿ ಹಾಗೂ ಸದಸ್ಯರಾದ ಶಾಲಿನಿ, ಸಂತೋಷ್ ಪೂಜಾರಿ, ಶಶಿಕಲಾ, ಸುಭಾಷ್ ಚಂದ್ರ ಚೌಟ, ಪ್ರಸಾದ್, ಮುನಿರಾಜ್, ತುಳಸಿ ಮೂಲ್ಯ, ಜನಿತಾ ಮತ್ತು ದೀಕ್ಷಿತ್ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಮಪಂಚಾಯತ್ ಕಾರ್ಯದರ್ಶಿ ಸುನಂದ, ಒಕ್ಕೂಟದ ಕಾರ್ಯದರ್ಶಿ ಸವಿತಾ, ಸಿಬ್ಬಂದಿಗಳಾದ ಸುನೀತ, ದೀಕ್ಷಿತಾ ಮತ್ತು ಸುಕನ್ಯ ಉಪಸ್ಥಿತರಿದ್ದರು. ಎಂ.ಬಿ.ಕೆ ಮಾನಸ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಮುದಾಯ ಸಂಪನ್ಮೂಲ ವ್ಯಕ್ತಿ ಲವೀನಾ ವಂದಿಸಿದರು.

LEAVE A REPLY

Please enter your comment!
Please enter your name here