ಉಡುಪಿ: ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ 2002-2007ರ ಸಾಲಿನಲ್ಲಿ ಚಿತ್ರಕಲೆ ಬಗೆಗಿನ ಕಲಾ ಪದವಿಯನ್ನು ಪೂರೈಸಿದ ಕಲಾವಿದರ ತಂಡ 18 ವರ್ಷಗಳ ನಂತರ ಗಣೇಶೋತ್ಸವ ಸಂದರ್ಭದಲ್ಲಿ ಒಂದೆಡೆ ಕಲೆತು ಆಗಸ್ಟ್ 23 ರಂದು ಗಣೇಶ ಹಾಗೂ ಸಮಕಾಲ ಶೈಲಿಯ ಕಲಾಕೃತಿಗಳ ಪ್ರದರ್ಶನ ನೀಡಲಿದ್ದಾರೆ ಎಂದು ಕಲಾವಿದ ಡಾ. ಜನಾರ್ಧನ ಹಾವಂಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಟಿ ಬಸ್ ನಿಲ್ದಾಣದ ಬಳಿಯಿರುವ ವಿಭೂತಿ ಆಟ್ ಗ್ಯಾಲರಿಯಲ್ಲಿ ಬೆಳಗ್ಗೆ 10:30ಕ್ಕೆ ಮಧುರಂ ವೈಟ್ ಲೋಟಸ್ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಮರಣಿಕಾ ಸಂಸ್ಥೆಯ ಸಂಸ್ಥಾಪಕರಾದ ದಿವಾಕರ್ ಸನಿಲ್ ಹಾಗೂ ಕಲಾಶಾಲೆಯ ನಿರ್ದೇಶಕ ಡಾ. ನಿರಂಜನ್ ಯು.ಸಿ. ಉಪಸ್ಥಿತರಿರುವರು.
ಗುರುವಂದನೆ
ಈ ಸಂದರ್ಭದಲ್ಲಿ ಕಲಾವಿದ ದಿ. ಕೆ. ಎಲ್. ಭಟ್ ಸಂಸ್ಕರಣೆ, ಕಲಾವಿದ ಗುರುಗಳಾದ ವಿಶ್ವೇಶ್ವರ ಪರ್ಕಳ, ಡಾ. ನಿರಂಜನ್ ಯು.ಸಿ. ಡಾ. ವಿಶ್ವನಾಥ ಎ.ಎಸ್., ಬಸವರಾಜ ಕುತ್ನಿ, ಸುಮಂಗಲಾ ಭಟ್. ಡಾ. ಭಾರತಿ ಮರವಂತೆ, ಮಹೇಶ್ ಉಮತಾರ್, ಗಣೆದ ಮಂದಾರ, ಶಂಕರ್ ಹಂದಾಡಿ ಹಾಗೂ ಮುರಳಿ ಕೃಷ್ಣ ರಾವ್ ಗುರುವಂದನೆ ಸಲ್ಲಿಸಲಾಗುವುದು.
ಕಲಾವಿದರಾದ ಅನ್ನಪೂರ್ಣ ಕಾಮತ್, ಡಾ. ಜನಾರ್ದನ ರಾವ್ ಹಾವಂಜೆ, ಕಾಂತಿ ನವೀನ್ ಪ್ರಭು, ಪ್ರಶಾಂತ್ ಕೋಟ, ಪ್ರವೀಣ್ ಮಲ್ಲಾರ್, ಪುರಂದರ್ ಎಸ್. ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋಧ ಎಸ್. ಸನಿಲ್ ರಚಿಸಿರುವ ಗಣೇಶ ಹಾಗೂ ಸಮಕಾಲೀನ ಶೈಲಿಯ ಸುಮಾರು 25ರಷ್ಟು ಕಲಾಕೃತಿಗಳು ಕಲಾಪ್ರದರ್ಶನದಲ್ಲಿರಲಿದೆ. ಈ ಪ್ರದರ್ಶನವು ದಿನಾಂಕ 23ರಿಂದ 31ರ ತನಕ ಅಪರಾಹ್ನ 2ರಿಂದ 6ರವರೆಗೆ ಕಲಾಸಕ್ತರ ವೀಕ್ಷಣೆಗೆ ತೆರೆದಿರಲಿದೆ ಎಂದರು.
23ರಂದು ಸಂಜೆ 4ಕ್ಕೆ ಕಾವಿಕಲೆಯ ಪುನರುಜ್ಜಿವನದ ಬಗೆಗಿನ ಡಾಕ್ಯುಮೆಂಟರಿ ಪ್ರದರ್ಶನ ಹಾಗೂ ಸಂವಾದವನ್ನು ಡಾ. ಜನಾರ್ದನ ರಾವ್ ಹಾವಂಜೆ, 24ರಂದು “ಕಾಣದ ಕಡಲು” ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದವನ್ನು ಕಲಾವಿದೆ ಕಾಂತಿ ನಾಯಕ್, 29ರಂದು “ಕಲೆ ಹಾಗೂ ಪ್ರಕೃತಿ” ನಿಸರ್ಗದ ಜೊತೆಗಿನ ಅನುಭವಗಳನ್ನು ಹವ್ಯಾಸಿ ಚಾರಣೆಗೆ ಸುಜೇಂದ್ರ ಕಾರ್ಲ ಹಾಗೂ 31ರಂದು ಮಕ್ಕಳಿಗೆ ಉಪಯುಕ್ತವೆನಿಸುವ ಕರಕುಶಲ ಕಲೆಯ ನಿರ್ಮಾ ಪ್ರಕ್ರಿಯೆಯ ಪ್ರದರ್ಶನವನ್ನು ಯಶೋಧಾ ಎಸ್. ಸನಿಲ್ ನಡೆಸಿಕೊಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಸೂರಜ್ ಕುಮಾರ್, ವಿದ್ಯಾ ಎಲ್ಲೂರು, ಕಾಂತಿ ನವೀನ ಪ್ರಭು, ಪುರಂದರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

