ಮೂಲ್ಕಿ : ಅತ್ಯಂತ ಸಾಧು ಸ್ವಭಾವದ ಎಲ್ಲರ ಅಚ್ಚುಮೆಚ್ಚಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಬಸವ ಕೃಷ್ಣ (18) ಇಂದು(ಜು.01) ಬೆಳ್ಳಿಗ್ಗೆ ಮೃತಪಟ್ಟಿದೆ.
ಶ್ರೀ ದೇವಳದ ಜಾತ್ರಾ ಮಹೋತ್ಸವ ಸಹಿತ ಬಲಿ ಉತ್ಸವಗಳಲ್ಲಿ ಭಾಗಿಯಾಗುತ್ತಾ ಸದೃಢ ಶರೀರದ ಕೃಷ್ಣ ಕಳೆದ 8 ದಿನಗಳಿಂದ ಆಹಾರ ಸೇವಿಸದೆ, ಮಲಮೂತ್ರ ವಿಸರ್ಜಿಸದೆ ಇದ್ದ ಕಾರಣ ಸ್ಥಳೀಯ ಪಶು ವೈದ್ಯ ಡಾ.ಪ್ರಸನ್ನ ಚಿಕಿತ್ಸೆ ನೀಡಿದರು. ವಾರ ಕಳೆದರೂ ಸಮಸ್ಯೆ ಪರಿಹಾರವಾಗದ ಕಾರಣ ವೈದ್ಯರ ಸಲಹೆಯಂತೆ ಕೃಷ್ಣನನ್ನು ಮಂಗಳೂರು ಪಶು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಾ.ಜಿ.ಕೆ.ಭಟ್ ಮತ್ತು ಡಾ.ಮೃದುಳಾ ಕೃಷ್ಣನ ಆರೋಗ್ಯ ತಪಾಸಣೆ ಮಾಡಿದ್ದಾರೆ. ಬಳಿಕ ಕೃತಕ ಪೈಪ್ ಅಳವಡಿಸಿ ಮಲಮೂತ್ರವನ್ನು ಹೊರತೆಗೆಯಲಾಗಿದ್ದು, ನಂತರ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಶಸ್ತ್ರ ಚಿಕಿತ್ಸೆ ಬಳಿಕ ಕೃಷ್ಣ ಆಹಾರ ಸೇವಿಸಲು ಆರಂಭಿಸಿದ್ದು ಶೀಘ್ರ ಸಮಸ್ಯೆ ಪರಿಹಾರವಾಗುವ ಭರವಸೆ ವ್ಯಕ್ತವಾಗಿತ್ತು ಅದರಂತೆ ಸೋಮವಾರ(ಜೂ.30) ರಾತ್ರಿ ಬಸವ ಕೃಷ್ಣನನ್ನು ಬಪ್ಪನಾಡಿಗೆ ವಾಪಸ್ ಕರೆತಂದು ಚಿಕಿತ್ಸೆ ಹಾಗೂ ಆಹಾರ ನೀಡಲಾಗುತ್ತಿತ್ತು.
ಆದರೆ ಮಂಗಳವಾರ(ಜು.01) ಬೆಳಿಗ್ಗೆ 5 ಗಂಟೆಗೆ ಬಸವ ಕೃಷ್ಣ ಉಸಿರು ನಿಲ್ಲಿಸಿದ್ದಾನೆ. ಸಾವಿರಾರು ಜನ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಬಸವ ಕೃಷ್ಣನನ್ನು ದಫನ ಮಾಡಲಾಯಿತು. ಕೃಷ್ಣನನ್ನು 12 ವರ್ಷಗಳ ಹಿಂದೆ ಶ್ರೀ ದೇವಳಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ್ದರು.