ಜಾರ್ಕಳ ಮುಂಡ್ಲಿಯಲ್ಲಿ ಭುವನೇಂದ್ರ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರ ಸಮಾರೋಪ

0
5

ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯ‌ ವಾರ್ಷಿಕ ಶಿಬಿರ ಫೆ. 28ರಿಂದ 7 ದಿನಗಳ ಕಾಲ ಜಾರ್ಕಳ ಮುಂಡ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದ್ದು ಮಾ. 6ರಂದು ಸಮಾರೋಪ ಸಮಾರಂಭ ಜರುಗಿತು.

ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಮಾತನಾಡಿ, ಮುಂಡ್ಲಿಯಲ್ಲಿ ನಡೆದ ಈ ಎನ್‌ಎಸ್‌ಎಸ್‌ ಶಿಬಿರ ಭುವನೇಂದ್ರ ಕಾಲೇಜಿನ ಇತಿಹಾಸದ ಪುಟಗಳಲ್ಲಿ ಸ್ಮರಣೀಯವಾಗಲಿದೆ. ಏಕೆಂದರೆ ಇಲ್ಲಿಯ ಜನರು ತೋರಿಸಿದ ಪ್ರೀತಿ, ನಮ್ಮೊಂದಿಗೆ ಬೆರೆತ ರೀತಿ ಧನ್ಯವಾದ ಎಂದು ಮಾತಿನಲ್ಲಿ ಹೇಳುವುದಕ್ಕಿಂತಲೂ ಮಿಗಿಲಾದುದು ಎಂದ ಅವರು ಇಲ್ಲಿಯ ಬಡಮಕ್ಕಳ ಉನ್ನತ ಶಿಕ್ಷಣಕ್ಕೆ ಭುವನೇಂದ್ರ ಕಾಲೇಜು ಸದಾ ತೆರೆದಿರುತ್ತದೆ‌ ಎಂದರು.

ಅಭಿನಂದನಾರ್ಹ

ಮುಂಡ್ಲಿ ಶಾಲೆಯ ಹಳೆವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ ಹಾಗು ಊರವರು ಅತಿಥಿ ದೇವೊಭವ ಎಂಬ ಪರಿಕಲ್ಪನೆಯಲ್ಲಿ ಶಿಬಿರಾರ್ಥಿಗಳಿಗೆ ಬೇಕಾದ ಮೂಲಭೂತ ಅಗತ್ಯತೆಗಳನ್ನು ನಿರೀಕ್ಷೆಗೂ ಮಿಗಿಲಾಗಿ ಅಚ್ಚುಕಟ್ಟಾಗಿ ಒದಗಿಸಿಕೊಟ್ಟಿರುವುದು ಅಭಿನಂದನಾರ್ಹ ಎಂದರು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿದಿನ ರಾತ್ರಿ ಶಿಬಿರಾರ್ಥಿಗಳು ಹಾಗು ಸ್ಥಳೀಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಸುಡುಮದ್ದುಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಿದ್ದು, ಪ್ರತಿದಿನ ದೊಡ್ಡ ಸಂಖ್ಯೆಯಲಿ ಗ್ರಾಮಸ್ಥರು ಈ ಕಾರ್ಯಕ್ರಮಗಳ ವೀಕ್ಷಣೆಗೆ ಆಗಮಿಸುತ್ತಿದ್ದು ಗಮನಾರ್ಹವಾಗಿದೆ.

ಶಾಶ್ವತ ಯೋಜನೆಯ ಚಿಂತನೆ

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ, ಶಿಕ್ಷಕ ಪ್ರಜ್ವಲ್‌ ಕುಮಾರ್‌ ಜೈನ್‌ ಮಾತನಾಡಿ, ನಮ್ಮ ಶಾಲೆಯಲ್ಲಿ ನಡೆದ ಈ ಎನ್‌ಎಸ್‌ಎಸ್‌ ಶಿಬಿರ ಅವಿಸ್ಮರಣೀಯವಾಗಿ ಉಳಿಯುವಂತೆ ಮಾಡಲು ಶಾಲಾಭಿವೃದ್ದಿ ಸಮಿತಿ ಹಾಗು ಹಳೆವಿದ್ಯಾರ್ಥಿ ಸಂಘ ಶಾಶ್ವತ ಕಾಮಾಗಾರಿಯೊಂದರ ಯೋಜನೆಯನ್ನು ರೂಪಿಸಿಕೊಂಡಿದ್ದು ಅದನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿಎ ಶಿವಾನಂದ ಪೈ ವಹಿಸಿದ್ದರು. ಶ್ರೀ ಭುವನೇಂದ್ರ ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀವರ್ಮ ಅಜ್ರಿ, ಪುರೋಹಿತರಾದ ಬಾಲಕೃಷ್ಣ ಭಟ್‌, ಜಾರ್ಕಳ ಮುಂಡ್ಲಿ ಯುವಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ದಿವಾಕರ ಪೂಜಾರಿ, ಸೌಹಾರ್ದ ಫ್ರೆಂಡ್ಸ್‌ ಕ್ಲಬ್‌ ಗೌರವಾಧ್ಯಕ್ಷ ಭಾಸ್ಕರ ಆಚಾರ್ಯ, ಶ್ರೀ.ಕ್ಷೇ.ಧ.ಗ್ರಾ.ಯೋ. ಜಾರ್ಕಳ ಮುಂಡ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರ ಪೂಜಾರಿ, ಸಾಮೂಹಿಕ ಶ್ರೀ ಸತ್ಯನಾರಯಣ ಪೂಜಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸವಿತಾ ಲಕ್ಷ್ಮಣ್‌, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಕರಾನಂದ ಶೆಟ್ಟಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ್‌ ಭಟ್ ಪಿ., ಆಂತರಿಕ ಗುಣಮಟ್ಟ ಕೋಶ ಸಂಯೋಜಕ ಲಕ್ಷ್ಮೀ ನಾರಾಯಣ ಕೆ.ಎಸ್.‌, ಸಹ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ನಂದಕಿಶೋರ್‌, ಶಾಲಾ ಮುಖ್ಯ ಶಿಕ್ಷಕಿ ರತ್ನಮ್ಮ ಎಸ್.ಬಿ. ಮತ್ತಿತರರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here