ಜಬಲ್ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ತೋರಿದ ಬುದ್ಧಿವಂತಿಕೆ ಮತ್ತು ಆತನನ್ನು ಹಿಡಿಯಲು ಪೊಲೀಸರು ನಡೆಸಿದ ಕಾರ್ಯಾಚರಣೆಯು ವೈರಲ್ ಆಗಿದೆ. ಕಳ್ಳನೊಬ್ಬ ಸತತ 5 ಗಂಟೆಗಳ ಕಾಲ ಕೆರೆಯ ನೀರಿನಲ್ಲಿ ಅಡಗಿ ಕುಳಿತು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಕಳ್ಳನನ್ನು ಕಮಲೇಶ್ ಎಂದು ಗುರುತಿಸಲಾಗಿದೆ. ಈತ ಜಬಲ್ಪುರದ ಬೆಲ್ಖೇಡಾ ಭಾಗದಲ್ಲಿ ಕಳವು ಮಾಡಿ ಪರಾರಿಯಾಗುತ್ತಿದ್ದಾಗ ಪೊಲೀಸರು ಬೆನ್ನಟ್ಟಿದ್ದರು. ತಪ್ಪಿಸಿಕೊಳ್ಳಲು ದಾರಿ ಕಾಣದ ಕಳ್ಳ ಸಮೀಪದಲ್ಲಿದ್ದ ಕಮಲದ ಹೂವುಗಳಿಂದ ತುಂಬಿದ್ದ ಕೆರೆಗೆ ಹಾರಿದ್ದಾನೆ.
ಪೊಲೀಸರು ಕೆರೆಯ ಸುತ್ತುವರೆದರೂ ಕಳ್ಳ ಎಲ್ಲೂ ಕಾಣಿಸಲಿಲ್ಲ. ಆದರೆ ಆತ ಮಾಡಿದ್ದ ಉಪಾಯ ಮಾತ್ರ ಅಚ್ಚರಿ ಮೂಡಿಸುವಂತಿತ್ತು. ನೀರಿನ ಅಡಿಯಲ್ಲಿ ಪೂರ್ತಿ ಮುಳುಗಿ ಕುಳಿತಿದ್ದ ಕಳ್ಳ, ಉಸಿರಾಡಲು ಕಮಲದ ಹೂವಿನ ಪೊಳ್ಳಾದ ದಂಟನ್ನು ಕೊಳವೆಯಂತೆ ಬಳಸುತ್ತಿದ್ದ! ಒಂದು ತುದಿಯನ್ನು ಬಾಯಿಯಲ್ಲಿ ಇಟ್ಟುಕೊಂಡು, ಮತ್ತೊಂದು ತುದಿಯನ್ನು ನೀರಿನ ಮೇಲ್ಮೈಗೆ ಬರುವಂತೆ ಮಾಡಿ ಪೊಲೀಸರಿಗೆ ತಿಳಿಯದಂತೆ ಉಸಿರಾಡುತ್ತಿದ್ದ.
ಪೊಲೀಸರು ಸತತ 5 ಗಂಟೆಗಳ ಕಾಲ ಕೆರೆಯ ದಂಡೆಯ ಮೇಲೆ ಕಾಯುತ್ತಾ ಕುಳಿತರು. ಎಷ್ಟು ಹೊತ್ತಾದರೂ ಕಳ್ಳ ಹೊರಬರದಿದ್ದಾಗ, ಅನುಮಾನಗೊಂಡ ಪೊಲೀಸರು ಸ್ಥಳೀಯರ ಸಹಾಯದಿಂದ ಬಲೆ ಬೀಸಿ ತಪಾಸಣೆ ನಡೆಸಿದಾಗ ಕಳ್ಳ ನೀರಿನ ಒಳಗೆ ಅಡಗಿರುವುದು ಪತ್ತೆಯಾಗಿದೆ. ಶೀತ ಮತ್ತು ನೀರಿನಲ್ಲಿ ದೀರ್ಘಕಾಲ ಇದ್ದ ಕಾರಣ ಹೈರಾಣಾಗಿದ್ದ ಕಳ್ಳನನ್ನು ಪೊಲೀಸರು ಹೊರಕ್ಕೆಳೆದು ಬಂಧಿಸಿದ್ದಾರೆ.

