ಕಟೀಲು: ಮುಜರಾಯಿ ಇಲಾಖೆಯ ಸೂಚನೆಯಂತೆ ಆಗಸ್ಟ್ 15ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ದೇಗುಲದಲ್ಲಿ 2016 ಇಸವಿಯಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲಾಗಿತ್ತು. ಪಂಚಕಜ್ಜಾಯ ಇತ್ಯಾದಿ ಪಾಕೀಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲಾಗಿತ್ತು. ಹೂವಿನ ಪ್ರಸಾದ ಸೇರಿದಂತೆ ಇತರ ಪ್ರಸಾದ ನೀಡಲು ಡಿಆರ್ಡಿಒ ಕಂಡುಹಿಡಿದ ಮೆಕ್ಕೆ ಜೋಳ ಮತ್ತು ಮರಗೆಣಸು ಇತ್ಯಾದಿ ವಸ್ತುಗಳಿಂದ ಮಾಡುವ ಕರಗಿಹೋಗುವ ಉತ್ಪನ್ನದಿಂದ ಮಾಡಲಾದ ಚೀಲವನ್ನು ಕಳೆದ ಒಂದು ವರ್ಷದಿಂದ ಬಳಸುತ್ತಿದ್ದೇವೆ. ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್ ಬಳಸದಂತೆ ಎಚ್ಚರ ವಹಿಸಲಾಗುತ್ತಿದೆ. ಕಳೆದ ವರ್ಷದಿಂದ ಕಟೀಲು ಮೇಳಗಳಲ್ಲೂ ಪ್ರತಿದಿನ ಏಕಬಳಕೆಯ ಪ್ಲಾಸ್ಟಿಕ್ ಬಳಸದಂತೆ ಜನಜಾಗೃತಿಯ ಬ್ಯಾನರ್ ಅಳವಡಿಸಿ ಪೂರ್ಣವಲ್ಲದಿದ್ದರೂ ಸಣ್ಣ ಮಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ಪ್ಲಾಸ್ಟಿಕ್ ಡಬ್ಬಿಯಲ್ಲಿ ಕೊಡುತ್ತಿದ್ದ ತ್ರಿಮಧರ ಪ್ರಸಾದ ರದ್ದುಪಡಿಸಲಿದ್ದೇವೆ. ತೀರ್ಥ ಬಾಟಲಿಗೆ ಪರ್ಯಾಯ ವ್ಯವಸ್ಥೆಗೆ ಪ್ರಯತ್ನ ಮಾಡುತ್ತಿದ್ದೇವೆ. ಒಟ್ಟಾರೆ ಪ್ಲಾಸ್ಟಿಕ್ ಬಳಕೆಯನ್ನು ಮಾಡದಿರಲು ಪ್ರಾಮಾಣಿಕ ಪ್ರಯತ್ನವನ್ನು ಈ ಹಿಂದೆಯೇ ಮಾಡಿದ್ದು, ಇದೀಗ ಭಕ್ತರಲ್ಲೂ ಜನಜಾಗೃತಿಗಾಗಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಯಶಂಕರ್ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕನ್ನು ಬಳಸದಂತೆ ಜನಜಾಗೃತಿ ಮಾಡಲಾಗುವುದು ಎಂದರು.