ದೇಶದ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮ ಗಾಂಧಿ ಅವರ ಮಾತನ್ನೇ ಪಾಲಿಸದ ಕಾಂಗ್ರೆಸಿಗರು ಸ್ವಾತಂತ್ರ್ಯ ದೊರೆತ 79 ವರ್ಷಗಳ ಬಳಿಕವೂ ಕೇವಲ ಸೇಡಿನ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಗಾಗಿ ಮಾತ್ರ ಮಹಾತ್ಮ ಗಾಂಧಿ ಅವರ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ವಿಷಾದನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಾಮರಾಜ್ಯದ ಪರಿಕಲ್ಪನೆಯೊಂದಿಗೆ ಬಡತನ ಮುಕ್ತ ಸ್ವಾವಲಂಬಿ ಗ್ರಾಮ ನಿರ್ಮಾಣದ ಚಿಂತನೆಯೊಂದಿಗೆ ಬಡವರ, ರೈತರ ಮತ್ತು ಮಹಿಳಾ ಸಬಲೀಕರಣದ ಸಹಿತ ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಸುಧಾರಿತ ಆದಾಯ ನೀಡುವ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ವಿಬಿ-ಜಿ ರಾಮ್ ಜಿ’ ಯೋಜನೆಯಲ್ಲಿರುವ ಮಹಾತ್ಮ ಗಾಂಧಿ ಅವರಿಗೆ ಪ್ರಿಯವಾದ ‘ರಾಮ್’ ಹೆಸರನ್ನು ಕಾಂಗ್ರೆಸಿಗರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿಯೇ ಇಂತಹ ಉದಾತ್ತ ಯೋಜನೆಯನ್ನು ಯಾವುದೇ ಮೌಲ್ಯಯುತ ಕಾರಣವಿಲ್ಲದೆ ಕಾಂಗ್ರೆಸ್ ವಿರೋಧಿಸುತ್ತಿದೆ.
ಹಳ್ಳಿಗಳ ಅಭಿವೃದ್ಧಿಗೆ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ವಿಫಲವಾಗಿರುವ ಕಾಂಗ್ರೆಸ್ ಈ ಹಿಂದೆ ‘ರೋಜ್ಗಾರ್’ ಯೋಜನೆಯನ್ನು ‘ನರೇಗಾ’ ಎಂದು ಪುನರ್ ನಾಮಕರಣ ಮಾಡಿದೆ. ಬಳಿಕ ಅದನ್ನು ‘ಮನ್ರೇಗಾ’ ಎಂದು ಬದಲಾವಣೆ ಮಾಡಿದೆ. ಕಾಂಗ್ರೆಸ್ ಅದೆಷ್ಟು ಯೋಜನೆಗಳಿಗೆ ನೆಹರೂ ಕುಟುಂಬದ ಹೆಸರನ್ನೇ ಇರಿಸಿದೆ ಎಂಬುದು ಜಗಜ್ಜಾಹೀರಾಗಿದೆ.
ಗ್ರಾಮಾಭಿವೃದ್ಧಿಯ ದೂರದರ್ಶಿತ್ವದ ಚಿಂತನೆಯನ್ನು ಹೊಂದಿರುವ ‘ವಿಬಿ-ಜಿ ರಾಮ್ ಜಿ’ ಯೋಜನೆಯಡಿ ಗ್ರಾಮ ಪಂಚಾಯತ್ಗಳೇ ಅಭಿವೃದ್ಧಿ ಯೋಜನೆಯನ್ನು ರೂಪಿಸುತ್ತವೆ. ತಂತ್ರಜ್ಞಾನವನ್ನು ಬಳಸಿ ಭ್ರಷ್ಟಾಚಾರಕ್ಕೆ ತಡೆ ಹಾಕಲಾಗುತ್ತದೆ. ಈ ಹಿಂದೆ ಇದ್ದ ವಾರ್ಷಿಕ 100 ದಿನಗಳ ಕೆಲಸವನ್ನು ಇದೀಗ 125 ದಿನಗಳಿಗೆ ವಿಸ್ತರಿಸಲಾಗಿದೆ. ದಿನದ ಕೂಲಿಯನ್ನು (ಸಂಬಳ) ರೂ.174 ರಿಂದ ರೂ.370ಕ್ಕೆ ಏರಿಸಲಾಗಿದೆ. ಪ್ರತಿ ವ್ಯಕ್ತಿಗೆ ಈ ಹಿಂದೆ ಇದ್ದ ವಾರ್ಷಿಕ ಗರಿಷ್ಠ ಮಿತಿಯನ್ನು ರೂ.17,400 ರಿoದ ರೂ.46,250ಕ್ಕೆ ಏರಿಸಲಾಗಿದೆ.
ಇಂತಹ ಉದಾತ್ತ ಯೋಜನೆ ಜಾರಿಯಾದರೆ ಬಿಜೆಪಿ ಜನಪ್ರಿಯತೆ ಇನ್ನಷ್ಟು ಹೆಚ್ಚುತ್ತದೆ ಹಾಗೂ ತ್ರಿಸ್ತರ ಸರಕಾರಗಳಲ್ಲಿ ಒಂದಾಗಿರುವ ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ವಿಬಿ-ಜಿ ರಾಮ್ ಜಿ’ ಯೋಜನೆಯಿಂದ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭವಾಗಲಿದೆ ಎಂಬುದನ್ನು ಮನಗಂಡಿರುವ ಕಾಂಗ್ರೆಸ್ ನಿರಂತರ ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿರುವುದು ಖಂಡನೀಯ. ಜನ ವಿರೋಧಿ, ಅಭಿವೃದ್ಧಿ ವಿರೋಧಿ ನೀತಿಗಳಿಂದ ದೇಶದೆಲ್ಲೆಡೆ ತಿರಸ್ಕೃತಗೊಂಡಿರುವ ಕಾಂಗ್ರೆಸ್ ಗೆ ಜನತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

