ಮುಲ್ಕಿ : ಕಲಿಕೆ ಜೊತೆಗೆ ಗುರುಗಳ ಆಶೀರ್ವಾದ ಶೈಕ್ಷಣಿಕ ಸಾಧನೆಗೆ ಪೂರಕವಾಗಿದೆ. ಭವಿಷ್ಯದಲ್ಲಿ ಸ್ವ ಉದ್ಯೋಗದತ್ತ ಮಹತ್ವ ನೀಡಿ ಯುವಜನತೆ ಉದ್ಯಮಿಗಳಾಗಿ ರೂಪಗೊಳ್ಳುವಲ್ಲಿ ಶ್ರಮವಹಿಸಬೇಕಾಗಿದೆ ಎಂದು ಸೌದಿ ಅರೇಬಿಯಾ ಉದ್ಯಮಿ ನೌಫಾಲ್ ಅಹಮದ್ ಹೇಳಿದರು. ಅವರು ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಜರಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಮುಲ್ಕಿ ಸಿಎಸ್ಐ ಚರ್ಚ್ ಧರ್ಮ ಗುರುಗಳಾದ ರೆ| ಸ್ಟೀವನ್ ಸರ್ವೋತ್ತಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿ ಶಿಕ್ಷಕ. ಪಾಠದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವು ಮಕ್ಕಳನ್ನು ಸಂಸ್ಕೃತಿವಂತರನ್ನಾಗಿ ರೂಪುಗೊಳ್ಳುವಲ್ಲಿ ಸಹಾಯಕ. ಶಿಕ್ಷಕರು ಶಿಕ್ಷಣದ ಪ್ರತಿಪಾದಕರು ಎಂದು ಹೇಳಿದರು.
ಸನ್ಮಾನ/ಗೌರವಾರ್ಪಣೆ : ಸಿಎಸ್ಐ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ನೀರಜ ವಿ.ಆಳ್ವ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ವೃಂದವರನ್ನು ಗೌರವಿಸಲಾಯಿತು. ಶಿಕ್ಷಕರಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಆರಿಶ್, ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಡೇವಿಡ್ ಕರ್ಕಡ, ಕಾರ್ಯಕ್ರಮ ಸಂಯೋಜಕರಾದ ಎಲಿಜಬೆತ್ ಪುಷ್ಪಲತಾ, ಸೆಲ್ವಿ ಸುಧಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಫಾತಿಮ ಸಫ ಸ್ವಾಗತಿಸಿದರು. ವಿದ್ಯಾರ್ಥಿ ರಿಶಾನ್ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಮೇವೀಸ್ ಸನ್ಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಭೂಮಿಕ ವಂದಿಸಿದರು. ವಿದ್ಯಾರ್ಥಿನಿ ಆಯಿಷತುಲ್ ಶಫ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಾದ ಶಮ್ನ, ರೋಶ್ನಿ ಶಿಕ್ಷಕ ದಿನದ ಮಹತ್ವ ತಿಳಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.