ಮಂಗಳೂರು: ಈ ಹಿಂದೆ ಮಂಗಳೂರಿಂದ ಜಮ್ಮು ವರೆಗೂ ಒಂದು ರೈಲು ಓಡುತ್ತಿತ್ತು, ಕೋವಿಡ್ (Covd 19) ಅದಕ್ಕೆ ಸಡನ್ ಬ್ರೇಕ್ ಹಾಕಿದ ಕಾರಣ ಜನ ಈಗ ಮತ್ತೊಮ್ಮೆ ಆ ರೈಲನ್ನು ಪುನಃ ಟ್ರ್ಯಾಕ್ ಗೆ ತಗೊಂಡು ಬನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ನಿಂತು ಹೋದ, ದೇಶದ ಅತಿ ದೀರ್ಘ ಪ್ರಯಾಣದ ರೈಲುಗಳ ಪೈಕಿ 4 ನೇ ಸ್ಥಾನ ಪಡೆದಿದ್ದ ನವಯುಗ ಎಕ್ಸ್ಪ್ರೆಸ್ ರೈಲನ್ನು ಮತ್ತೆ ಮಂಗಳೂರು ಸೆಂಟ್ರಲ್ ನಿಂದ ಜಮ್ಮು ಕತ್ರಾಕ್ಕೆ ಪುನರಾರಂಭಿಸಬೇಕೆಂಬ ರೈಲು ಬಳಕೆದಾರರ ಆಗ್ರಹ ಮುಗಿಲು ಮುಟ್ಟಿದೆ.
ಕನ್ನಡ ಕರಾವಳಿಯಿಂದ ಉತ್ತರ ಭಾರತಕ್ಕೆ ಮೊದಲ ರೈಲಿನ ಸಾಧ್ಯತೆ
ಮಂಗಳೂರು – ಜಮ್ಮು ನವಯುಗ ಎಕ್ಸ್ ಪ್ರೆಸ್ ರೈಲು 1990 ರಲ್ಲಿ ಆರಂಭಗೊಂಡಿತ್ತು. 2015 ರಲ್ಲಿ ಜಮ್ಮುವಿನ ಕತ್ರ ತನಕ ವಿಸ್ತರಣೆಯಾಯಿತು. ಕೋವಿಡ್ ಸಂದರ್ಭ ಎಲ್ಲ ರೈಲು ಸೇವೆಗಳು ನಿಂತಿದ್ದು, ಬಳಿಕ ಒಂದೊಂದೇ ಪುನರಾರಂಭಗೊಂಡರೂ ಮಂಗಳೂರು ಸೆಂಟ್ರಲ್- ಕತ್ರಾ ನವಯುಗ ಎಕ್ಸ್ಪ್ರೆಸ್ ಮಾತ್ರ ಆರಂಭಗೊಂಡಿರಲಿಲ್ಲ. ಇದರಿಂದಾಗಿ ಕರಾವಳಿಯಿಂದ ವೈಷ್ಣೋದೇವಿ ಸೇರಿದಂತೆ ದೇಶದ ಪ್ರಮುಖ ಯಾತ್ರಾಸ್ಥಳಗಳಿಗೆ ಹೋಗುತ್ತಿದ್ದ ಯಾತ್ರಿಗಳಿಗೆ ದೊಡ್ಡ ನಷ್ಟವಾಗಿದೆ. ಮಂಗಳೂರಿನಿಂದ ಉತ್ತರ ಭಾರತಕ್ಕೆ ಹೋಗುವ ಒಂದೇ ಒಂದು ರೈಲು ಇಲ್ಲದಿರುವ ಕಾರಣ ನವಯುಗ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು- ಸುಬ್ರಹ್ಮಣ್ಯ ರೋಡ್-ಹಾಸನ- ಅರಸಿಕೆರೆ- ಹುಬ್ಬಳ್ಳಿ- ಬೆಳಗಾವಿ- ಮೀರಜ್- ಪುಣೆ- ದೆಹಲಿ ಮಾರ್ಗದಲ್ಲಿ ಓಡಿಸಬೇಕೆಂದು ಒತ್ತಾಯಿಸಿ ಪುತ್ತೂರು- ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ ವತಿಯಿಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಕಳೆದ ಜೂನ್ 12 ರಂದು ಮನವಿ ಸಲ್ಲಿಲಾಗಿದೆ. ಒಟ್ಟಾರೆ ಕಡಲನಗರಿಯ ಜನರಿಗೆ ಹಿಮದೂರಿನ ಪಯಣದ ಭಾಗ್ಯ ಒದಗಿ ಬರಲಿದೆಯೇ ಕಾದು ನೋಡಬೇಕಿದೆ.