ಉಜಿರೆ : ಹಾಸನದ ಸೋಮು ಅವರ ನೇತೃತ್ವದಲ್ಲಿ ಯುವಜನ ಸೇನಾ ಪ್ರತಿಷ್ಠಾನ, “ಕುಡುಮಶ್ರೀ” ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿ, ಭಕ್ತವೃಂದ, ಏಕಲವ್ಯ ಜೀವಜಲ ಪ್ರತಿಷ್ಠಾನದ ಸದಸ್ಯರು ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ವಚ್ಛತಾಕಾರ್ಯವನ್ನು ಸೇವೆಯಾಗಿ ಮಾಡಿದರು.
ಮೂವತ್ತು ಪುರುಷರು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು ನಲ್ವತ್ತು ಮಂದಿ ಸ್ವಚ್ಛತಾಕಾರ್ಯದಲ್ಲಿ ಭಾಗವಹಿಸಿದರು. ಇವರೆಲ್ಲರೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯಲ್ಲಿ ಹಾಗೂ ಶೌರ್ಯ ಕಾರ್ಯಕ್ರಮಗಳಲ್ಲಿ ಸೇವೆ ಮಾಡುತ್ತಿದ್ದು ಅದರಿಂದ ಪ್ರೇರಿತರಾಗಿ ಸ್ವಚ್ಛತಾಕಾರ್ಯ ನೆರವೇರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಕ್ತರ ಸೇವಾಕಾರ್ಯವನ್ನು ಶ್ಲಾಘಿಸಿ, ಅಭಿನಂದಿಸಿದರು.

