ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ವಾರ್ಷಿಕ ಪ್ರತಿಷ್ಠಿತ ರಾಜ್ಯ ಮಟ್ಟದ “ವಂದನಾ ಪ್ರಶಸ್ತಿ – 2026”ಯನ್ನು ಶನಿವಾರ 21-03-2026 ರಂದು ಸಂಜೆ 07.30 ಗಂಟೆಗೆ ನಗರದ ಹೊಟೇಲ್ ಸೀ ವ್ಯೂವ್ನ ಸಭಾಂಗಣದಲ್ಲಿ ಜರಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿಯವರಾದ ರೋ| ಡಾ| ದೇವದಾಸ್ ರೈಯವರು ಪತ್ರಿಕಾ ಮಾಹಿತಿ ನೀಡಿದ್ದಾರೆ.
ಪ್ರಸ್ತುತ 2026ನೇ ಸಾಲಿನ ಪ್ರಶಸ್ತಿಗೆ ಕೇರಳಂ ರಾಜ್ಯದ, ಕಾಸರಗೋಡು ಜಿಲ್ಲಾ ಮೂಲದ ಹಸಿರು ಕ್ರಾಂತಿಕಾರ ಹಾಗೂ ಪರಿಸರ ಪ್ರೇಮಿ ಡಾ. ರಾಧಾಕೃಷ್ಣ ನಾಯರ್ರವರು ಭಾರತ ದೇಶದ ಹಸಿರು ನಾಯಕ ಎಂದು ಖ್ಯಾತಿ ಪಡೆದವರು ಆಯ್ಕೆಯಾಗಿದ್ದಾರೆ.
ಅವರು ದೇಶದ 12 ರಾಜ್ಯಗಳಲ್ಲಿ ಸಾವಿರಾರು ಎಕ್ರೆ ಬಂಜರು ಭೂಮಿಯನ್ನು ಜಪಾನ್ ರಾಷ್ಟç ಮಾದರಿಯ ಮಿಯಾವಾಕಿ ಅರಣ್ಯ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಪರಿಗಣಿಸಿ ಅವರ ಅಮೂಲ್ಯ ಕೊಡುಗೆ ಮತ್ತು ಸಾಧಿಸಿದ ಗಣನೀಯ ಸಾಧನೆ ಯನ್ನು ಪ್ರಶಂಸಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರುರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ರೋ| ಭಾಸ್ಕರ್ ರೈ ಕಟ್ಟಾ ಅಧ್ಯಕ್ಷತೆ ವಹಿಸಲಿರುವರು. ರೋಟರಿ ಜಿಲ್ಲಾ 3181ರ ಸಹಾಯಕ ಗರ್ವನರ್ ರೋ| ಪ್ರೋ ಡಾ. ಚಿನ್ನಗಿರಿ ಗೌಡ, ರೋರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮೈಸೂರು ನಗರ ಮೂಲದ ರೋ| ಪ್ರಜ್ವಲ್ ಆರ್., ಗೌರವ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಳಲಿರುವರು.
ರೋಟರಿ ಮತ್ತು ರೋರ್ಯಾಕ್ಟ್ ಸಂಸ್ಥೆಯ ಪ್ರತಿಷ್ಠಿತ ವಂದನಾ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ರೀಡೆ, ವಾಣಿಜೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿ ಸೇವೆ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು. ಇದು ರೋಟರಿ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿ ಪ್ರದಾನ ಮಾಡಲಾಗುವುದೆಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿಯಾದ ರೋ| ಡಾ| ದೇವದಾಸ್ ರೈ ಪತ್ರಿಕಾ ಮಾಹಿತಿ ನೀಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ , ರೋ| ಭಾಸ್ಕರ್ ರೈ ಕಟ್ಟಾ, ಕಾರ್ಯದರ್ಶಿ ರೋ. ವಿಕಾಸ್ ಕೋಟ್ಯಾನ್, ನಿಯೋಜಿತ ಅಧ್ಯಕ್ಷ ರೋ. ರವೀಂದ್ರ, ರೋ. ಪ್ರಮೀಳಾ ಹೆಗ್ಡೆ, ರೋರ್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷರಾದ ರೋ ಅಕ್ಷಯ್ ಬಿ. ರೈ ಮತ್ತು ಮಾಧ್ಯಮ ಸಲಹೆಗಾರರಾದ ರೋ| ಎಂ.ವಿ. ಮಲ್ಯ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

