ಮೂಡುಬಿದಿರೆ : ಗಾಂಧಿನಗರದಲ್ಲಿರುವ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸ ಹಾಗೂ ವನಭೇಟಿ ಕಾರ್ಯಕ್ರಮವನ್ನು ಪುತ್ತಿಗೆ ಗ್ರಾಮದ ಹಂಡೇಲು ಚಿಕ್ಪಾಡಿಯಲ್ಲಿ ಆಯೋಜಿಸಲಾಯಿತು.
ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಪ್ರಕೃತಿ ನಡಿಗೆಯ ಮೂಲಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಸಸ್ಯವೈವಿಧ್ಯ, ತೋಟ–ಗದ್ದೆಗಳ ವೀಕ್ಷಣೆ ನಡೆಸಿದರು. ತರಕಾರಿ ಗಿಡಗಳ ಬೆಳವಣಿಗೆ ಕ್ರಮ, ಅವುಗಳ ಪೋಷಣೆ ಹಾಗೂ ಉಪಯೋಗಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ನೀಡಲಾಯಿತು. ಅಪರೂಪದ ತೋಡು ಪ್ರದೇಶವನ್ನು ವೀಕ್ಷಿಸಿ, ಅಲ್ಲಿ ಕಂಡುಬರುವ ಜೀವಜಾಲ ಮತ್ತು ಪರಿಸರ ವೈಶಿಷ್ಟ್ಯಗಳ ಕುರಿತು ಶಿಕ್ಷಕರು ವಿವರಿಸಿದರು.
ಇದೇ ವೇಳೆ ಕೊಬ್ಬರಿಯಿಂದ ಎಣ್ಣೆ ತೆಗೆಯುವ ಪಾರಂಪರಿಕ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಕೃಷಿ ಆಧಾರಿತ ಜೀವನಶೈಲಿ, ನೈಸರ್ಗಿಕ ಸಂಪನ್ಮೂಲಗಳ ಮಹತ್ವ ಹಾಗೂ ಸ್ವಾವಲಂಬನೆಯ ಬಗ್ಗೆ ತಿಳಿವಳಿಕೆ ನೀಡಲಾಯಿತು.
ಸ್ಥಳೀಯರಾದ ಅಶೋಕ್ ಕುಲಾಲ್ ಹಾಗೂ ಮಲ್ಲಿಕಾ ಅವರು ವಿದ್ಯಾರ್ಥಿಗಳಿಗೆ ಮಾಹಿರಿ ನೀಡಿದರು.
ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡ ಈ ಅಧ್ಯಯನ ಪ್ರವಾಸ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಹಾಗೂ ಪ್ರಕೃತಿ ಪ್ರೀತಿ ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಮುಖ್ಯ ಶಿಕ್ಷಕಿ ಕಸ್ತೂರಿ ಎಚ್.,ಶಿಕ್ಷಕಿಯರಾದ ಸುಪ್ರಿತಾ, ಅಕ್ಷತಾ ಉಪಸ್ಥಿತರಿದ್ದರು.

