ಮೂಡುಬಿದಿರೆ: ಜೈನ ಪರಂಪರೆಯನ್ನು ಶ್ರೀಮಂತ ಕಲೆಯಾದ ಯಕ್ಷಗಾನದ ಹಿಂದಿನ ಪರಂಪರೆಯನ್ನು ನೆನಪಿಸುವಂತಹ ಪ್ರಯತ್ನವನ್ನು ಶ್ರೀಧರ ಪಾಂಡಿಯವರ ನೆನಪಿನಲ್ಲಿ ಮಾಡುತ್ತಿದ್ದೇವೆ. ಇದು ನಮ್ಮ ಬಹು ವರ್ಷಗಳ ಕನಸು. ಮುಂಬರುವ ದಿನಗಳಲ್ಲಿ ಯಕ್ಷಗಾನವನ್ನು ದೊಂದಿ ಬೆಳಕಿನೊಂದಿಗೆ ಯಕ್ಷಗಾನ ಪರಂಪರೆಯ ಮೂಲಸ್ವರೂಪದಲ್ಲಿ ಯಾವುದೇ ಆಧುನಿಕ ಉಪಕರಣಗಳು ಇಲ್ಲದೇ, ಪ್ರಕೃತಿಯೊಂದಿಗೆ ಬೆರೆತು ಪ್ರಸ್ತುತಪಡಿಸುವ ಉದ್ದೇಶ ಹಿಂದಿದ್ದೇವೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯ ಆವರಣದ ಮರೋಡಿ ಗುಡ್ಡನ್ಬೆಟ್ಟು ಗುತ್ತು ದಿ.ಶಾಂತಿರಾಜ ಪಾಂಡಿ ಮತ್ತು ನಲ್ಲೂರು ಮರ್ದ್ರಬೆಟ್ಟು ದಿ.ಭಜಬಲಿ ಅಧಿಕಾರಿ ಸ್ಮರಣೀಯ ವೇದಿಕೆಯಲ್ಲಿ ಭಾನುವಾರ ನಡೆದ ಯಕ್ಷಗಾನ ಅರ್ಥಧಾರಿ, ಪ್ರಸಂಗಕತೃ ಎಂ. ಶ್ರೀಧರ ಪಾಂಡಿ ಸಾಣೂರು ಅವರ 14ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ. ಎಂ. ರಾಘವ ನಂಬಿಯಾರ್ ಅಧ್ಯಕ್ಷತೆವಹಿಸಿದರು. ಅಜಿತ್ ಜೈನ್ ನಾರಾವಿ ಧಾರ್ಮಿಕ ಉಪನ್ಯಾಸ ನೀಡಿದರು.
ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯನಾರಾಯಣ ಭಟ್ ಅವರಿಗೆ ಶ್ರೀಧರ ಪಾಂಡಿಯವರ ಸಂಸ್ಕರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ, ವಾಗ್ಮಿ ಮುನಿರಾಜ ರೆಂಜಾಳ ಸಂಸ್ಮರಣಾ ಮಾತುಗಳನ್ನಾಡಿ, ಹಿಂದೂ ಪುರಾಣ ಕಥೆಗಳು ಯಕ್ಷಗಾನದಲ್ಲಿ ಬಹಳಷ್ಟಿದೆ. ಆದರೆ ಜಿನಕಥೆಗಳನ್ನು ಯಕ್ಷಗಾನದಲ್ಲಿರುವುದು ವಿರಳ. ಪಾಂಡಿಯವರು ಜಿನ ಸಂಸ್ಕೃತಿಯನ್ನು 24 ಪ್ರಸಂಗಳಲ್ಲಿ ರಚಿಸಿದ್ದಾರೆ. ಶ್ರೀಧರ ಪಾಂಡಿಯವರು ಬರೆದ ಯಕ್ಷಗಾನ ಪ್ರಸಂಗ ಮಸ್ತಾಕಭೀಷೇಕ ಸಂದರ್ಭದಲ್ಲಿ ಪ್ರಸಾರವಾಗಿದೆ. ಅವರ ಕೆಲವು ಪ್ರಸಂಗಕೃತಿಗಳು ಪುಸ್ತಕ ರೂಪಕ್ಕೆ ಬಂದಿದೆ. ಕೆಲವೊಂದಿಷ್ಟು ಪುಸ್ತಕ ರೂಪಕ್ಕೆ ಬರಲು ಬಾಕಿ ಇದೆ. ಸುಲಲಿತವಾಗಿ ಮತ್ತು ಮನಮುಟ್ಟುವಂತೆ ಇರುವುದರಿಂದ ಪಾಂಡಿಯವರ ಯಕ್ಷಗಾನ ಪ್ರಸಂಗಗಳು ಭಾಗವತರಿಗೆ ಅಚ್ಚುಮೆಚ್ಚು ಎಂದರು.
ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ.ಕೆ. ಗುಣಪಾಲ ಕಡಂಬ, ನಿವೃತ್ತ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇರ್ವತ್ತೂರು, ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ,ಶ್ರೀಧರ್ ಪಾಂಡಿ ಅವರ ಪುತ್ರ ಶ್ರೀಕಾಂತ್ ಪಾಂಡಿ ಉಪಸ್ಥಿತರಿದ್ದರು.
ಶ್ರೀಶಾ ಅತಿಕಾರಿ ಸ್ವಾಗತಿಸಿದರು. ಜಯಶ್ರೀ ಅತಿಕಾರಿ ಕಾರ್ಯಕ್ರಮ ನಿರೂಪಿಸಿದರು. ನಾಗವರ್ಮ ಜೈನ್ ಸನ್ಮಾನಪತ್ರ ವಾಚಿಸಿದರು. ವರ್ಷಾ ಅಧಿಕಾರಿ ವಂದಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಎಂ. ಶ್ರೀಧರ ಪಾಂಡಿ ಸಾಣೂರು ಅವರು ರಚಿಸಿದ ಪ್ರಸಂಗವಾದ `ಜಿನಕಥೆಯ ದೊಂದಿ ಬೆಳಕಿನ ಯಕ್ಷಗಾನ ಶ್ರೀ ಪಾರ್ಶ್ವನಾಥ ಚರಿತೆ ಯನ್ನು ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು.
Home Uncategorized ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯನಾರಾಯಣ ಭಟ್ ಅವರಿಗೆ ಶ್ರೀಧರ ಪಾಂಡಿಯವರ ಸಂಸ್ಕರಣಾ ಪ್ರಶಸ್ತಿ ಪ್ರದಾನ

