ಮೂಡುಬಿದಿರೆ ತಾಲೂಕಿನ ವಿಶ್ವವಿದ್ಯಾಲಯ ಕಾಲೇಜು ಬನ್ನಡ್ಕ ಇಲ್ಲಿನ ಎನ್ಎಸ್ಎಸ್ ಘಟಕದ ವತಿಯಿಂದ 14 ಮಾರ್ಚ್ 2026 ರಂದು ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನಾತ್ಮಕ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಳ್ವಾಸ್ ಫಾರ್ಮಸಿ ಹಾಗೂ ಆಳ್ವಾಸ್ ಶೋಭಾವನಗೆ ಭೇಟಿ ನೀಡಿದರು.
ಈ ವೇಳೆ ಫಾರ್ಮಸಿಯ ಜಯರಾಮ್ ಅವರು ಆಯುರ್ವೇದ ಔಷಧ ತಯಾರಿಕಾ ವಿಧಾನ, ಔಷಧೀಯ ಸಸ್ಯಗಳ ಮಹತ್ವ ಮತ್ತು ಔಷಧ ತಯಾರಿಕೆಯಲ್ಲಿ ಅನುಸರಿಸುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿಗಳು ಔಷಧ ತಯಾರಿಕೆಯ ಪ್ರಕ್ರಿಯೆಯನ್ನು ಸಮೀಪದಿಂದಲೇ ಗಮನಿಸಿ ಪ್ರಾಯೋಗಿಕ ಮಾಹಿತಿ ಪಡೆದರು.
ನಂತರ ವಿದ್ಯಾರ್ಥಿಗಳು ಆಳ್ವಾಸ್ ಶೋಭಾವನದಲ್ಲಿ ವಿವಿಧ ಔಷಧೀಯ ಸಸ್ಯಗಳನ್ನು ವೀಕ್ಷಿಸಿ, ಅವುಗಳ ಉಪಯೋಗಗಳ ಕುರಿತು ತಿಳಿದುಕೊಂಡರು. ಈ ಅಧ್ಯಯನ ಭೇಟಿಯಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯೋಜಕರಾದ ಸಂತೋಷ್ ಹಾಗೂ ಡಾ. ಸುಜಾತಾ ಭಾಗವಹಿಸಿದ್ದರು.
ವರದಿ ರಾಯಿ ರಾಜ ಕುಮಾರ

