ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ʻಯುರೇಕಾ – 2026ʼ, ನಾಲ್ಕನೇ ದಿನದ ಶಿಬಿರದಲ್ಲಿ ಮಂಗಳೂರಿನ ರಾಷ್ಟ್ರೀಯ-ಅಂತಾರಾಷ್ಟ್ರೀಯ ಖ್ಯಾತ ಕಲಾವಿದರು ಹಾಗೂ ಪರಿಸರ ಶಾಸ್ತ್ರಜ್ಞ ದಿನೇಶ್ ಹೊಳ್ಳ ಅವರು ಪರಿಸರ ಸಂರಕ್ಷಣೆ ಹಾಗೂ ಪರಿಸರ ಪ್ರೇಮದ ಕುರಿತು ಜಾಗೃತಿ ಮೂಡಿಸುವ ಬಗ್ಗೆ ಅವಧಿಯನ್ನು ನಡೆಸಿಕೊಟ್ಟರು. ಪೂರ್ವಾಹ್ನದ ಅವಧಿಯಲ್ಲಿ ಪಶ್ಚಿಮ ಘಟ್ಟವನ್ನು ಹೇಗೆ ಸಂರಕ್ಷಿಸಬಹುದು? ಇಂದಿನ ಯುವಜನತೆಯಲ್ಲಿ ಪರಿಸರ ಪ್ರೇಮ ಹಾಗೂ ಕಲೆಯ ಕುರಿತು ಜಾಗೃತಿ ಹೇಗೆ ಮೂಡಿಸಬಹುದು? ನಮ್ಮ ಮೂಲ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳದೆ ಹೋದರೆ ನಾವು ಎದುರಿಸಬೇಕಾಗಬಲ್ಲ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ನಂತರದ ಅವಧಿಯಲ್ಲಿ ಬರವಣಿಗೆಯನ್ನು ಸುಧಾರಿಸುವ ವಿನೂತನ ವಿಧಾನ, ರೇಖಾ ಚಿತ್ರಗಳನ್ನು ಬಿಡಿಸುವ ಹಾಗೂ ಅವುಗಳನ್ನು ಮುಖಪುಟ, ಗ್ರಾಫಿಕ್ಸ್ ಮುಂತಾದ ಕಡೆಗಳಲ್ಲಿ ಉಪಯೋಗಿಸುವುದರ ಕುರಿತಾದ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು. ಅಪರಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ಬಣ್ಣದ ಕಾಗದಗಳನ್ನು ಬಳಸಿಕೊಂಡು ವಿವಿಧ ಕರಕುಶಲ ವಸ್ತು ಹಾಗೂ ವಿನ್ಯಾಸಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಶಿಬಿರಾರ್ಥಿಗಳು ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡರು. ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

