ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ, ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ 14ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ 6ನೇ ವರ್ಷದ ಶನೀಶ್ವರ ಪೂಜೆ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಫೆ. 21ರಂದು ದರೆಗುಡ್ಡೆ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸಮಿತ್ರಾಜ್ ದರೆಗುಡ್ಡೆ ತಿಳಿಸಿದ್ದಾರೆ.
ಅಂದು ವೇ|ಮೂ| ನಾಗರಾಜ ಭಟ್ ನೇತೃತ್ವದಲ್ಲಿ ಸಾಯಂಕಾಲ 4.00ಗಂಟೆಗೆ ಕಲಶ ಪ್ರತಿಷ್ಠೆ, ಶ್ರೀ ಶನೀಶ್ವರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಗಂಟೆ 7.30ರಿಂದ ಅನ್ನಸಂತರ್ಪಣೆ, ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಕಲಾವಿದರಿಂದ ನೃತ್ಯ ಸಿಂಚನ, ಸಪ್ತಸ್ವರ ಮೆಲೋಡೀಸ್ ವಾಮದಪದವು, ಕಟೀಲೇಶ್ವರಿ ಮೆಲೋಡೀಸ್ ಕೆಲ್ಲಪುತ್ತಿಗೆ ಇವರಿಂದ ಸಂಗೀತ ರಸಮಂಜರಿ ನಂತರ ಸಭಾ ಕಾರ್ಯಕ್ರಮ ನಡೆಯಲಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಕುಡ್ಲ ಇವರ ಪರಮಾತ್ಮೆ ಪಂಜುರ್ಲಿ ಎಂಬ ಪಾಡ್ದನ ಆಧಾರಿತ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಈ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಭಾಸ್ಕರ ಎಸ್. ಕೋಟ್ಯಾನ್ ಅವರಿಗೆ ಮತ್ತು ಸಮಾಜ ಸೇವಕ ಡಿ. ಕಿರಣ್ಚಂದ್ರ ಪುಷ್ಪಗಿರಿ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಖ್ಯಾತ ಉದ್ಯಮಿ ರುದ್ರಾಂಶ ಕನ್ಸ್ಟ್ರಕ್ಷನ್ ಮಾಲಕ ಅಜಯ್ ಶೆಟ್ಟಿ ಅವರಿಗೆ ಉದ್ಯಮ ರತ್ನ ಪ್ರಶಸ್ತಿ ಹಾಗೂ ರಾಷ್ಟ್ರಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಪ್ರತಿನಿಧಿಸಿದ ಅನ್ವಿತಾ ವಿ. ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.

