ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯ ಸಮಸ್ಯೆಗಳು ದಿನಕ್ಕೊಂದರಂತೆ ಮತ್ತೆ ಮತ್ತೆ ಉಲ್ಬಣಿಸುತ್ತಿದೆ. ಮೂಡುಬಿದಿರೆಯಲ್ಲಿ ಇಲ್ಲದ ಶಾಸಕರಿಗೆ ಇದರ ಬಗ್ಗೆ ತಿಳಿಯುವುದಾದರೂ ಹೇಗೆ?
ಬಸು ನಿಲ್ದಾಣದ ಅವ್ಯವಸ್ಥೆ, ದ್ವಿಚಕ್ರ ವಾಹನಗಳ ವ್ಯವಸ್ಥೆ ಇದ್ದು ಇಲ್ಲದಂತಾಗಿರುವ ಅವಸ್ಥೆ, ಮುಖ್ಯ ಮಾರ್ಗಗಳ ಪಾದಾಚಾರಿ ಸ್ಥಳದ ಅತಿಕ್ರಮಣ, ನೀರಿನ ಶೇಖರಣಾ ಪಳ್ಳ, ಕೆರೆಗಳ ಅತಿಕ್ರಮಣ, ಎಲ್ಲವೂ ರಾಜಾರೋಷದಿಂದ ಢಾಳಾಗಿ ಗೋಚರಿಸುತ್ತಿದ್ದರೂ, ತಿಳಿದಿದ್ದರೂ ಕ್ರಮ ಕೈಗೊಳ್ಳದೆ ತೆಪ್ಪಗೆ ಕುಳಿತ ಮುಖ್ಯಾಧಿಕಾರಿಗಳು, ಶಾಸಕರು.
ಶಾಸಕರು ಪ್ರವೇಶಿಸುವ ಬಿ ಇ ಓ ಕಚೇರಿಯ ಬದಿಯ ಪ್ರದೇಶಕ್ಕೆ ಖಾಸಗಿ ವ್ಯಕ್ತಿಗಳು ಬೇಲಿಯನ್ನು ಹಾಕಿರುತ್ತಾರೆ. ಇದು ಸರಕಾರಿ ಪ್ರದೇಶ ಎನ್ನುವುದು ತಿಳಿದಿದ್ದರೂ, ಮಂಗಳೂರಿನಿಂದ ಆಗಮಿಸುವಾಗ ನೇರವಾಗಿ ಕಾಣಿಸುತ್ತಿದ್ದರೂ, ಸ್ವತಹ ಮುಖ್ಯಾಧಿಕಾರಿಗಳೇ ಪುರಸಭಾ ಸಭೆಯಲ್ಲಿ ಒಂದು ವಾರದಲ್ಲಿ ನಿವಾರಿಸುವ ಭರವಸೆ 3 ವಾರ ಕಳೆದರೂ ಯಥಾಸ್ಥಿತಿಯಲ್ಲಿದೆ.
ಮೀನು ಮಾರುಕಟ್ಟೆಯ ಪ್ರದೇಶದಿಂದ ಕೊಳಚೆ ಯಥಾಪ್ರಕಾರ ಆಳ್ವಾಸ್ ರಸ್ತೆಗೆ ಹರಿದು ಬರುತ್ತಿದೆ. ಆಳ್ವಾಸ್ ಆಸ್ಪತ್ರೆಯಿಂದ ಮಾರುಕಟ್ಟೆಗೆ ಹೋಗುವ ರಸ್ತೆಯ ಬದಿಯಲ್ಲಿ ಸೂಕ್ತ ಚರಂಡಿ ಇಲ್ಲದೆ ಹೊಟೇಲುಗಳವರು ನೇರವಾಗಿ ಕೊಳಚೆಯನ್ನು ರಸ್ತೆಗೆ ಬಿಡುತ್ತಿದ್ದಾರೆ. ಈ ಬಗ್ಗೆ ಕಳೆದ ಹಲವಾರು ತಿಂಗಳುಗಳಿಂದ ಹಿಂದಿನ ಜನಪ್ರತಿನಿಧಿಗಳು ಪುರಸಭಾ ಮೀಟಿಂಗ್ನಲ್ಲಿ ತಿಳಿಸಿದ್ದರೂ ಮುಖ್ಯಾಧಿಕಾರಿಗಳು ಈ ಮೇಲಿನ ಯಾವುದೇ ವಿಷಯಕ್ಕೂ ಕ್ರಮ ಕೈಗೊಳ್ಳದೇ ಉಪೇಕ್ಷಿಸಿದ್ದಾರೆ. ಶಾಸಕರಿಗೆ ಉದ್ಘಾಟನೆಗಳ ನಡುವೆ ಮೂಡುಬಿದಿರೆಯ ಪರಿಸ್ಥಿತಿ ತಿಳಿಯಲೂ ಪುರುಸೊತ್ತು ಇಲ್ಲ ಪಾಪ. ಯಾರಲ್ಲಿ ಹೇಳೋಣ ನಮ್ಮ ಪ್ರಾಬ್ಲಮ್? ಅಲ್ಲವೇ?


