ಹೆಬ್ರಿ :ಮುದ್ರಾಡಿ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ “ಹಿಂದೂ ಸಂಗಮ” ಸಮಾವೇಶ ಕಾರ್ಯಕ್ರಮವು ಮುದ್ರಾಡಿಯ ಪಂಚಮಿ ಮೈದಾನದಲ್ಲಿ ಫೆ. 8 ರಂದು ಯಶಸ್ವಿಯಾಗಿ ಜರಗಿತು.
ಮುದ್ರಾಡಿ ಶ್ರೀ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕೇಸರಿ ಧ್ವಜಗಳನ್ನು ಹಿಡಿದ ಹಿಂದೂ ಸಂಗಮದ ಶೋಭಾಯಾತ್ರೆಯು ವೇದಿಕೆಗೆ ಸಾಗಿ ಬಂತು.ಭಾರತಾಂಬೆ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಿತಿ ಸಂಚಾಲಕರಾದ ಗಣೇಶ್ ಕಿಣಿ ಬೆಳ್ವೆ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುತ್ತಾ ಹಿಂದೂ ಧರ್ಮವು ಸನಾತನ ಧರ್ಮವೆಂದು ಕರೆಯಲ್ಪಡುತ್ತಿದೆ. ಸಾಮರಸ್ಯ ಮತ್ತು ಸಹ ಬಾಳ್ವೆಯನ್ನು ಕಾಪಾಡುವುದು ನಮ್ಮ ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ. ಹಿಂದುತ್ವವೇ ಭಾರತ ದೇಶದ ಜೀವಾಳವಾಗಿದೆ. ಹಿಂದೂ ಸಂಗಮದಿಂದ ಸಮಾಜ ಜಾಗೃತವಾಗಲಿ ಎಂದರು.
ಉಪಾಧ್ಯಕ್ಷರಾದ ಡಾ. ಸುದರ್ಶನ್ ಮುನಿಯಾಲ್ ಮಾತನಾಡಿ ನಾಗರೀಕ ಶಿಷ್ಟಚಾರದ ಕುರಿತು ಜಾಗೃತಿ ಮೂಡಿಸುವುದು ಹಿಂದೂ ಸಂಗಮದ ಉದ್ದೇಶವಾಗಿದೆ. ಇದರಲ್ಲಿ ಗೋ ಪೂಜೆ, ದೇಶ ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜ ಸಂಘಟಿಸಲಾಗುತ್ತಿದೆ. ಹಿಂದೂ ಧರ್ಮದ ಸಂರಕ್ಷಣೆ ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ ಅದು ಹಿಂದೂ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಾದ ರವಿ ರಾವ್ ವಹಿಸಿದ್ದರು . ಅವರು ಮಾತನಾಡಿ ಹಿಂದೂ ಸಂಗಮದ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದೆಡೆ ಸೇರಿ ಸಾಮಾಜಿಕ ಚಿಂತನೆ, ಸಹ ಬಾಳ್ವೆ ಭಾವನೆ ಪ್ರಕಟಿಸುವ ಕಾರ್ಯಕ್ರಮ ಇದಾಗಿದೆ. ಹಿಂದೂ ಸಂಗಮದಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.
ಸುಬ್ಬಣ್ಣಕಟ್ಟೆ ಸೇವಾ ಸಂಗಮ ಶಿಶು ಮಂದಿರದ ಸ್ಥಾಪಕಿಯಾದ ಶಿಲ್ಪಾ ಶ್ರೀಧರ್ ನಾಯಕ್ ಉಪಸ್ಥಿತರಿದ್ದು ಸೇವಾ ಸಂಗಮ ಸಂಸ್ಥೆಯು 25 ವರ್ಷ ದಲ್ಲಿ ಬೆಳೆದುಬಂದ ರೀತಿಯನ್ನು ತಿಳಿಯಪಡಿಸಿದರು.
ಮುಖಂಡರಾದ ಗಣಪತಿ ಎಂ.ಮುದ್ರಾಡಿಯವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗಗನ್ ಶೆಟ್ಟಿ, ಕೌಶಿಕ್, ಅಭಿಜ್ಞಾ ಹೆಗ್ಡೆ ನಿರೂಪಿಸಿದರು. ಉಮೇಶ್ ಪೈ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು.

