ಈ ಹಿಂದೂ ಧರ್ಮದ ಶ್ರೇಣೀಕ್ರತ ವ್ಯವಸ್ಥೆಯೇ ಜಾತೀಯತೆಗೆ ಮೂಲ, ಈ ಜಾತೀಯ ವ್ಯವಸ್ಥೆಯೇ ಅಸ್ಪೃಶ್ಯತೆಗೆ ಮೂಲ ಕಾರಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದರು ಅವರು ಇಂದು ಹೆಬ್ರಿಯ ದೋರಿಯಾಲ್ ಎಂಬಲ್ಲಿ ಮಹಾಡ್ ಚಳುವಳಿಯ ನೆನಪಿನಲ್ಲಿ ನಡೆದ ” ಮಹಾಡ್ ಕೆರೆ ಚಳುವಳಿ ಕಥಾ ಕಥನಾ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮಹಾಡ್ ಚಳುವಳಿಯು “ಚೌದಾರ್ ಕೆರೆ ” ಯ ನೀರನ್ನು ಮುಟ್ಟಿ ಕುಡಿದದ್ದು , ದಲಿತರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದರು. ಮನುಷ್ಯರನ್ನು ಹುಟ್ಟಿದಾಗಿನಿಂದಲೇ ಅಸ್ಪೃಶ್ಯರಾಗಿ ಕಾಣುವ ಧರ್ಮವೊಂದಿದ್ದರೆ ಅದು ಹಿಂದೂ ಧರ್ಮ, ಇದರ ಅರಿವು ನಮಗಿರಬೇಕು… ಧರ್ಮದ ಹೆಸರಿನಲ್ಲಿ ನಮ್ಮನ್ನು ಹಿಂದೂಗಳು ಎಂದು ಓಟಿಗಾಗಿ ಓಲೖಸುವ ಜಾತೀಯ ಪ್ರತಿಪಾದಕರು , ಹಿಂದಿನಿಂದ ಅಸ್ಪೃಶ್ಯರಾಗಿ ನೋಡುತ್ತಲೇ…. ನೀವೂ ಹಿಂದೂಗಳು ನಾವೆಲ್ಲಾ ಒಂದು…. ನಾವೆಲ್ಲಾ ಬಂಧು ” ಎಂದು ಬೊಗಳೆ ಬಿಡುವ ಹಿಂಧುತ್ವವಾದಿಗಳ ಬಗ್ಗೆ ನಾವು ಜಾಗ್ರತರಾಗಿರಬೇಕು ಎಂದರು.ಇತ್ತೀಚೆಗೆ ಹುಬ್ಬಳ್ಳಿ ಸಮೀಪ ಕೆಳ ಜಾತೀಯ ಹುಡುಗನನ್ನು ಮಧುವೆಯಾದಳು ಎಂಬ ಒಂದೇ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನು ಸ್ವಂತ ತಂದೆಯೇ ಚೂರಿ ಹಾಕಿ ಕೊಂದದ್ದು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಇದು ವಾಸ್ತವ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ. ಸಂ. ಸ. ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರ್ ರವರು 1927ನೇ ಇಸವಿಯ ಇವತ್ತಿನ ದಿನ ಮಾರ್ಚ 20 ರಂದು ಮಹಾರಾಷ್ಟ್ರ ದ ಮಹಾಡ್ ನ ಸಾರ್ವಜನಿಕ ಚೌದಾರ್ ಕೆರೆಯ ನೀರನ್ನು , ಹಂದಿ, ನಾಯಿ, ಹಸುಗಳೆಲ್ಲಾ ಸ್ವೇಚ್ಛಾನುಸಾರವಾಗಿ ಕುಡಿದರೂ ದಲಿತರಿಗೆ , ಅಸ್ಪೃಶ್ಯರಿಗೆ ನೀರನ್ನು ಮುಟ್ಟಲು ಅವಕಾಶ ಇರಲಿಲ್ಲ , ಬಾಬಾಸಾಹೇಬರು ಸಾವಿರಾರು ದಲಿತರೊಂದಿಗೆ ಹೋಗಿ ಚೌದಾರ್ ಕೆರೆಯ ನೀರನ್ನು ಬೊಗಸೆಯಲ್ಲಿ ತೆಗೆದು ಕುಡಿದು ಪ್ರತಿಭಟಿಸಿದ್ದೇ , ಮಹಾಡ್ ಚಳುವಳಿ, ಈ ದಿನವು ಒಂದು ಐತಿಹಾಸಿಕ ದಿನವಾಗಿದ್ದು , ಈ ಚಳುವಳಿಯು ಅಸ್ಪೃಶ್ಯತೆ ವಿರುದ್ಧದ ಸ್ವಾಭಿಮಾನದ ಸಂಕೇತದ ಚಳುವಳಿಯಾಗಿದೆ.
ಈ ಮಹಾನ್ ಮಹಾಡ್ ಚಳುವಳಿಯನ್ನು ಮತ್ತೆ ಮತ್ತೆ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಅದರಲ್ಲೂ ಪೇಟೆ ಪಟ್ಟಣಗಳಲ್ಲಿ ಈ ಮಹಾಡ್ ಚಳುವಳಿಯನ್ನು ಆಚರಿಸುವುದಕ್ಕಿಂತ ನಮ್ಮ ಸಮೂದಾಯದವರ ವಸತಿ ಪ್ರದೇಶದ ಒಳಗೆ ಆಚರಿಸುವುದು ಔಚಿತ್ಯಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಇದರ ಬ್ರಹ್ಮಾವರ ತಾಲೂಕು ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ , ಕುಂದಾಪುರ ತಾಲೂಕು ಸಂಚಾಲಕರರಾದ ರಾಜು ಬೆಟ್ಟಿನಮನೆ, ಜಿಲ್ಲಾ ಸಂಘಟನಾ ಸಂಚಾಲಕರಾದ ದೇವು ಹೆಬ್ರಿ ಅತಿಥಿಗಳಾಗಿದ್ದರು. ಕುಮಾರ್ ಕೋಟಾ, ಬಿರ್ತಿ ಸುರೇಶ, ಕೆ. ಡಿ. ಹರೀಶ್ಚಂದ್ರ , ವಿಜಯ ಗಿಳಿಯಾರು, ಪ್ರಶಾಂತ್ ಬಿರ್ತಿ, ಬೋಜರಾಜ್ ಕಾವ್ರಾಡಿ ಉಪಸ್ಥಿತರಿದ್ದರು. ಸಂತೋಷ ಮಾಸ್ಟರ್ ಮುದ್ರಾಡಿ ಸ್ವಾಗತಿಸಿ , ಹೆಬ್ರಿ ತಾಲೂಕು ಸಂಚಾಲಕರಾದ ಅಣ್ಣಪ್ಪ ಮಾಸ್ಟರ್ ಮುದ್ರಾಡಿ ವಂದಿಸಿದರು.

