ಬೆಂಗಳೂರು ದಕ್ಷಿಣ (ರಾಮನಗರ): ಹೆಂಡತಿ ಕಿರುಕುಳ ತಾಳಲಾರದೇ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದೆ. ರೇವಂತ್ ಕುಮಾರ್(30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಮಲ್ಲಿಕಾಳ ಕಿರುಕುಳವನ್ನು ಸೆಲ್ಫಿ ವಿಡಿಯೋ ಮಾಡಿಟ್ಟು ಬಿಡದಿ ಬಳಿ ರೈಲಿಗೆ ತಲೆಕೊಟ್ಟ ರೇವಂತ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಬಿಡದಿ ಬಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕೇವಲ 5 ತಿಂಗಳ ಹಿಂದೆ ವಿವಾಹವಾಗಿದ್ದ.
ಬಿಡದಿ ಬಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರೇವಂತ್, ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದು, ಮನೆಯಲ್ಲಿ ಪತ್ನಿ ತುಂಬಾ ಕಷ್ಟ ಕೊಡುತ್ತಿದ್ದಾಳೆ. ನನ್ನ ಸಾವಿಗೆ ನನ್ನ ಪತ್ನಿ ಮಲ್ಲಿಕಾ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿಟ್ಟು ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಈ ಸಂಬಂಧ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ವಿಡಿಯೋನಲ್ಲೇನಿದೆ?
ಇನ್ನು ರೇವಂತ್ ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ನಾನು ಇವತ್ತು ಸಾಯೋಕೆ ಹೊರಟ್ಟಿದ್ದೇನೆ. ಅದಕ್ಕೆ ಕಾರಣ ಹೆಂಡ್ತಿ, ತುಂಬ ಕಷ್ಟು ಕೊಡುತ್ತಿದ್ದಾಳೆ. ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಬದುಕುವುದಕ್ಕೂ ಆಗುತ್ತಿಲ್ಲ. ನನ್ನ ಹೆಂಡ್ತಿ ಮಲ್ಲಿಕಾಯಿಂದ ತುಂಬಾ ಟಾರ್ಚರ್ ಆಗುತ್ತಿದೆ. ನನ್ನ ಸಾವಿಗೆ ಅವಳೇ ಕಾರಣ ಎಂದು ವಿಡಿಯೋ ನಲ್ಲಿ ಹೇಳಿಕೊಂಡಿದ್ದಾನೆ.