ಸ್ವಾರ್ಥಕ್ಕಾಗಿ ಇಂದಿರಾ ಗಾಂಧಿಯಿಂದ ಸಂವಿಧಾನದ ದುರುಪಯೋಗ : ಕೋಟ

0
9

ತುರ್ತು ಪರಿಸ್ಥಿತಿಯಲ್ಲಿ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ‘ಭೋಲೋ ಭಾರತ್ ಮಾತಾಕಿ ಜೈ’ ಅಂದಿದ್ದಕ್ಕೆ ಡಾ! ವಿ.ಎಸ್. ಆಚಾರ್ಯ ಅವರನ್ನು ಜೈಲಿಗೆ ಹಾಕಲಾಗಿತ್ತು. ಅವರ ಪತ್ನಿ ಗರ್ಭಿಣಿ ಆಗಿದ್ದರೂ ಅವರ ಜೊತೆ ಮಾತನಾಡಲು ಬಿಟ್ಟಿರಲಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ‘ಸಂವಿಧಾನ ಹತ್ಯಾ ದಿನ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 50 ವರ್ಷದ ಕೆಳಗೆ ಜೂ.25ರಂದು ಇಂದಿರಾ ಗಾಂಧಿ ಅವರು ಪ್ರಧಾನಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಏಕೈಕ ಉದ್ದೇಶದಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದರು. ದೇಶಕ್ಕೆ ಅನಾಹುತ ಆಗುವ ಸಂದರ್ಭದಲ್ಲಿ ಮಾತ್ರ ತುರ್ತು ಪರಿಸ್ಥಿತಿಯನ್ನು ಹೇರಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿತ್ತು. ಅದನ್ನು ಇಂದಿರಾ ಗಾಂಧಿ ಸಂಪೂರ್ಣ ದುರುಪಯೋಗ ಪಡಿಸಿಕೊಂಡಿದ್ದರು. ಪ್ರತಿಪಕ್ಷ, ಪತ್ರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಯಿತು ಎಂದರು.

ಸರ್ವೋದಯ ಆಂದೋಲನದಲ್ಲಿ ತೊಡಗಿದ್ದ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪಾಯಿ, ಎಲ್.ಕೆ. ಅಡ್ವಾಣಿ, ಜಾರ್ಜ್ ಫೆರ್ನಾಂಡೀಸ್, ಡಿ.ಹೆಚ್. ಶಂಕರಮೂರ್ತಿ ಸೇರಿ ಹಲವಾರು ಸ್ಥಳೀಯ ಹೋರಾಟಗಾರರನ್ನು ಜೈಲಿಗೆ ಅಟ್ಟಲಾಗಿತ್ತು ಎಂದರು.

ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿ 5 ಜನರ ಹತ್ಯೆ ಆಯಿತು. ಮಂಗಳೂರಿನ ಮಧುಕರ್ ಎಂಬವರು ತುರ್ತು ಪರಿಸ್ಥಿತಿ ವೇಳೆ ಹೋರಾಟ ನಡೆಸಿದ್ದರು. ಈ ವೇಳೆ ಅವರ ಕಾಲು ಸ್ವಾಧೀನ ಕಳೆದುಕೊಂಡಿತ್ತು. ಅಂದಿನ ಕರಾಳತೆಯನ್ನು ಅವರು ಇಂದು ಕೂಡ ನೆನೆಯುತ್ತಾರೆ ಎಂದರು. ಒಟ್ಟು 38,000 ನಾಯಕರನ್ನು ಜೈಲಿಗಟ್ಟಲಾಗಿತ್ತು. ಇಲ್ಲಿನ ಮಾಧ್ಯಮಗಳನ್ನು ಸಂಪೂರ್ಣ ನಿಯಂತ್ರಿಸಲಾಗಿತ್ತು. ಆದರೆ ಬಿಬಿಸಿ ಮಾಧ್ಯಮ 2,000 ಜನ ಸತ್ತಿರುವ ಬಗ್ಗೆ ವರದಿ ನೀಡಿತ್ತು.

ಇದಲ್ಲದೇ ಅದೇ ಅವಧಿಯಲ್ಲಿ ಸಂತಾನ ಹರಣ ಮಾಡುವ ಯೋಜನೆ ಜಾರಿಗೆ ತಂದಿದ್ದ ಇಂದಿರಾ, ಆ ಮೂಲಕ ಗಲ್ಲಿ ಗಲ್ಲಿಗೆ ಹೋಗಿ, ಸಂತಾನ ಹರಣ ಮಾಡಿಸಲಾಯಿತು. ಅದಕ್ಕೆ ಒಪ್ಪಿದವರಿಗೆ 75 ರೂ. ಒಂದು ಪ್ಯಾಕೇಟ್ ತುಪ್ಪ ನೀಡುವ ಆಮಿಷ ಒಡ್ಡಿದ್ದರು ಎಂದರು.

1 ಕೋಟಿ ಗಂಡಸರನ್ನು ಸಂತಾನ ಹರಣ ಮಾಡಿಸಲಾಗಿತ್ತು. ಈ ಅವಧಿಯಲ್ಲಿ ಒಂದೇ ಗ್ರಾಮದಲ್ಲಿ 8 ಜನ ಸೇರಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ತುರ್ತು ಪರಿಸ್ಥಿತಿ ವೇಳೆ ಪಾರ್ಲಿಮೆಂಟ್ ಹಾಗೂ ವಿಧಾನ ಸೌಧ ಸರ್ವಾಧಿಕಾರಿಗಳು ಆಡುವ ಅಂಗಳವಾಗಿತ್ತು. ಅಂತಹ 21 ತಿಂಗಳು ಇದ್ದ ತುರ್ತು ಪರಿಸ್ಥಿತಿ ಮತ್ತೆ ಮತ್ತೆ ಬಾರದಿರಲಿ ಎಂದರು.

ತುರ್ತು ಪರಿಸ್ಥಿತಿ ಹೋರಾಟಗಾರರನ್ನು ನೆನೆಯೋಣ : ಕುತ್ಯಾರು

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನ ಆದವರ ಅಥವಾ ಹೋರಾಟ ಮಾಡಿದವರ ಪರಿಚಯ ಮಾಡುವ ಸಮಾವೇಶವನ್ನು ಆಯೋಜಿಸಬೇಕಿದೆ. ಹಾಗಾಗಿ ಪ್ರತೀ ಮಂಡಲ ಪ್ರಮುಖರು ಹೋರಾಟಗಾರರ ಪರಿಚಯವನ್ನು ಪಟ್ಟಿ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪೆರಣoಕಿಲ ಶ್ರೀಶ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆರ್ಗ ದಿನಕರ್ ಶೆಟ್ಟಿ ಸ್ವಾಗತಿಸಿ, ರೇಶ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ವಂದಿಸಿದರು.

LEAVE A REPLY

Please enter your comment!
Please enter your name here