ಕುಂದಾಪುರ ವಿಧಾನಸಭಾ ವ್ಯಾಪ್ತಿಯ 21 ಶಾಲೆಗಳಲ್ಲಿ ಯಕ್ಷ ಶಿಕ್ಷಣ ನೀಡಿ ಪ್ರದರ್ಶನಗಳ ವ್ಯವಸ್ಥೆ ಮಾಡಿದ್ದು ಈ ವರ್ಷದ ಕಿಶೋರ ಯಕ್ಷಗಾನ ಸಂಭ್ರಮ ಸಮಾಪನಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿರಣ್ ಕುಮಾರ ಕೊಡ್ಗಿಯವರು ಮುಂದಿನ ವರ್ಷಗಳಲ್ಲಿ ಶಾಲೆಗಳು ಇನ್ನೂ ಹೆಚ್ಚಿನ ಮುತುರ್ಜಿಯಿಂದ ತೊಡಗಿಸಿಕೊಳ್ಳ ಬೇಕಾದ ಅಗತ್ಯವಿದೆ. ಆಗ ಮಾತ್ರ ಯಕ್ಷಶಿಕ್ಷಣ ಟ್ರಸ್ಟ್, ಯಕ್ಷಗಾನ ಕಲಾರಂಗ, ಪ್ರದರ್ಶನ ಸಂಘಟನಾ ಸಮಿತಿಯವರ ಶ್ರಮ ಸಾರ್ಥಕ ವಾಗುತ್ತದೆ ಎಂದರು.
ಕುಂದ ಪ್ರಭದ ಸಂಪಾದಕರಾದ ಯು.ಎಸ್.ಶೆಣೈ ಮಾತನಾಡಿ ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ’ ಓದಿ ಬೆರಗಾದೆ. ಸಂಸ್ಥೆಯ ಸಮರ್ಥ ನಾಯಕತ್ವ, ಕಾರ್ಯಕರ್ತರ ಬದ್ಧತೆ ನಾಡಿಗೇ ಮಾದರಿಯಾಗಿದೆ ಎಂದರು. ಉದ್ಯಮಿ ಬೀಜಾಡಿ ನಾಗರಾಜ ರಾವ್,ಸುರೇಶ್ ಶೆಟ್ಟಿ ಕಾಡೂರು, ಉದಯ ಕುಮಾರ್ ಶೆಟ್ಟಿ, ಎಂ.ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಿರಣ್ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಸುಧೀರ್ ಕೆ. ಎಸ್, ನಾರಾಯಣ ಎಂ.ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಲೇಖನಾ,ತುಷಾರ, ಪ್ರಣತಿ ಶೆಟ್ಟಿ,ಸಂಜನಾ,ಸಂಜಿತ್ ಕುಮಾರ್, ಮನೋಜ್ ಯಕ್ಷ ಶಿಕ್ಷಣದ ತಮ್ಮ ಸ್ಮರಣೀಯ ಅನುಭವ ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸರಕಾರಿ ಪ್ರೌಢ ಶಾಲೆ ಕಾಳಾವರ ಇಲ್ಲಿನ ವಿದ್ಯಾರ್ಥಿಗಳಿಂದ ಸುಂದೋಪಸುಂದರ ಕಾಳಗ – ಮೀನಾಕ್ಷೀ ಕಲ್ಯಾಣ ಮತ್ತು ಕೆ.ಪಿ.ಎಸ್. ಕೋಟೇಶ್ವರ ಇಲ್ಲಿಯ ವಿದ್ಯಾರ್ಥಿಗಳಿಂದ ಮೀನಾಕ್ಷೀ ಕಲ್ಯಾಣ ಪ್ರಸ್ತುತಗೊಂಡಿತು.

