ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ, ವಿಜ್ಞಾಪನ ಪತ್ರ ಬಿಡುಗಡೆ

0
86

ಕರ್ಕಾಟಕ ಅಮವಾಸ್ಯೆ ಜಾತ್ರೆ ಸಂಭ್ರಮ ಶುಭ ಮುಹೂರ್ತದಲ್ಲಿ ದೇವರ ಮುಂಭಾಗದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ನೂತನ ದೇವಾಲಯದ ನೀಲಿ ನಕ್ಷೆನ್ನು ಅನಾವರಣ ಗೊಳಿಸಿದರು .
ಮತ್ತು ಮಾಜಿ ಶಾಸಕ ಕೆ ಗೋಪಾಲ್ ಪೂಜಾರಿ ಅವರು ಅಭಿವೃದ್ಧಿ ಸಮಿತಿಯ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಪಶ್ಚಿಮದಲ್ಲಿ ಭೋರ್ಗರೆಯುವ ಅರಬ್ಬಿ ಸಮುದ್ರ ಪೂರ್ವದಲ್ಲಿ ಮಂದಗಮನೆಯಾಗಿ ಸಾಗುತ್ತಿರುವ ಸೌಪರ್ಣಿಕಾ ನದಿ ಮಧ್ಯದಲ್ಲಿ ತ್ರಿಕೋನಾಕೃತಿಯ ಭೂಶೃಂಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಾರ್ಶ್ವದಲ್ಲಿ ಶ್ರೀ ಗಂಗಾಧರಸ್ವಾಮಿ ಸಹಿತವಾಗಿ ಅದಿನಾರಾಯಣನು ಶ್ರೀ ವರಾಹ, ಶ್ರೀ ವಿಷ್ಣು, ಶ್ರೀ ನರಸಿಂಹ ಅವತಾರಗಳಲ್ಲಿ ನೆಲೆ ನಿಂತಿರುವ ಶ್ರೀ ವರಾಹ ಸ್ವಾಮಿ ದೇವಾಲಯವೆಂದು ಖ್ಯಾತಿಗೊಂಡಿರುವ ಈ ಕ್ಷೇತ್ರವು ಬಹು ಪ್ರಾಚೀನವಾದ ವಿಶಿಷ್ಟಗಳ ಕೇಂದ್ರ. ಇತಿಹಾಸಕಾರರ ಅಭಿಪ್ರಾಯದಂತೆ ದೇವ ಮೂರ್ತಿಗಳು ಬಹು ಪುರಾತನವಾಗಿದ್ದು ಸುಮಾರು 2,000 ವರ್ಷಗಳ ಇತಿಹಾಸವಿರುವ ಕಲಿಯುಗದ ಮಧ್ಯಕಾಲದ ದೇವಳ ಇದಾಗಿದೆ.

ಜರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರಾಜಶೇಖರ್ ಹೆಬ್ಬಾರ್ ಅವರು ಮಾತನಾಡಿ. ಇಂತಹ ಅಭೂತಪೂರ್ವ ಇತಿಹಾಸದ ಕಾರಣಿಕ ಕ್ಷೇತ್ರದ ದೇವಾಲಯವು ಶಿಥಿಲಗೊಂಡಿದ್ದು ಅನಿವಾರ್ಯವಾಗಿ ಪುನರ್ ನಿರ್ಮಾಣ ಮಾಡಲೇಬೇಕಾಗಿದೆ. ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದೇವಾಲಯದ ಅಭಿವೃದ್ಧಿ ಸಮಿತಿ ನೇಮಕಗೊಂಡಿದ್ದು ಕಳೆದ 10 ತಿಂಗಳಿನಿಂದ ಕಾರ್ಯ ಪ್ರವರ್ತವಾಗಿದೆ. ಈಗಾಗಲೇ ವಾಸ್ತು ತಜ್ಞರ ಅಭಿಪ್ರಾಯದಂತೆ ದೇವಾಲಯದ ನೀಲಿ ನಕ್ಷೆ ತಯಾರಾಗಿದ್ದು, ಮಾನ್ಯ ಶಾಸಕರು ಹಾಗೂ ಮಾಜಿ ಶಾಸಕ ನೇತೃತ್ವದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ದೇವಾಲಯದ ಗರ್ಭಗುಡಿ, ಎಡನಾಳಿ, ತೀರ್ಥಮಂಟಪ, ಸುತ್ತು ಪೌಳಿ, ಸ್ವಾಗತ ಮಂಟಪ, ರಾಜಗೋಪುರ, ಕ್ಷೇತ್ರಪಾಲ ಗುಡಿ, ನೂತನ ಧ್ವಜಸ್ತಂಭ, ನೈವೇದ್ಯಕೋಣೆ, ನೂತನ ದಾಸೋಹ ಭವನ, ವ್ಯವಸ್ಥಿತ ಅಡುಗೆಕೋಣೆ ಮತ್ತು ಸಭಾಭವನ ಹಾಗೂ ಶ್ರೀ ಗಂಗಾಧರ ಸ್ವಾಮಿಯ ದೇವಾಲಯ ನಿರ್ಮಾಣ ಮುಂತಾದ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದ್ದು, ನಂತರ ಶ್ರೀ ದೇವರ ಪುನ‌ರ್ ಪ್ರತಿಷ್ಠಾ ಬ್ರಹ್ಮ ಕುಂಭಾಭಿಷೇಕ ನಡೆಯಬೇಕಿದೆ. ಈ ಬಗ್ಗೆ ದೈವಜ್ಞರ ಸಲಹೆಯಂತೆ ಪೂರ್ವಭಾವಿಯಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿ ಮುಷ್ಠಿ ಕಾಣಿಕೆ ಸಮರ್ಪಣೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಗಳಿಗೆ ಅಂದಾಜು 15 ಕೋಟಿ ರೂಪಾಯಿಗಳು ಅವಶ್ಯಕತೆ ಇದ್ದು, ಭಕ್ತರ ಸಹಕಾರದಿಂದ ಮಾತ್ರ ಸಾಧ್ಯ, ಶ್ರೀ ದೇವರ ಭಕ್ತರಾದ ತಾವೆಲ್ಲ ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀ ವರಾಹ, ಶ್ರೀ ವಿಷ್ಣು, ಶ್ರೀ ನರಸಿಂಹ, ಶ್ರೀ ಗಂಗಾಧರ ದೇವರ ಪರಮಾನುಗ್ರಹಕ್ಕೆ ಪಾತ್ರರಾಗ ಬೇಕೆಂದು ತಮ್ಮಲ್ಲಿ ವಿನಂತಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ 2000 ವರ್ಷ, ಹೊಂದಿರುವ ಇತಿಹಾಸ ಪ್ರಸಿದ್ಧ ಈ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದೇವೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಜೇಶ್ ಹೆಬ್ಬಾರ್ ,ಪ್ರಧಾನ ಕಾರ್ಯದರ್ಶಿ ರವಿ ಮಡಿವಾಳ್ ಮರವಂತೆ, ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು ಊರಿನ ಗ್ರಾಮಸ್ಥರು , ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here