ನಾಟಕದ ಉದ್ಘಾಟನೆಯನ್ನು ಮಾಡಿದ ಡಾ. ಆರ್. ನರಸಿಂಹ ಮೂರ್ತಿ ಜರ್ನಿ ಥೇಟರ್ ಗ್ರೂಪ್ ಚಟುವಟಿಕೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ವಿಶೇಷವಾಗಿ ಜರ್ನಿಯ ರಂಗಗೀತೆಗಳ ಕಾರ್ಯಕ್ರಮದ ಪ್ರಸ್ತುತಿಯನ್ನು ಶ್ಲಾಘಿಸಿದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ರೆ. ಫಾ.ಡಾ.ಪ್ರವೀಣ್ ಮಾರ್ಟಿನ್ ಎಸ್. ಜೆ. ನಾಟಕಕ್ಕೆ ಶುಭ ಹಾರೈಸಿದರು. ತ್ರಿಪುರಾದ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್(ಐಸಿಟಿಐ) ನ ಪ್ರೊಫೆಷನಲ್ ಡಿಪ್ಲೊಮಾ ತರಬೇತಿಗೆ ಆಯ್ಕೆಯಾಗಿರುವ ಅವಿನಾಶ್ ರೈ ಕುಂಬ್ಳೆ ಯವರನ್ನು ವೇದಿಕೆಯಲ್ಲಿ ಗೌರವಿಸಿ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ತ್ರಿಪುರಾದ ಐಸಿಟಿಐ ನ ದ್ವಿತೀಯ ವರ್ಷದ ವಿದ್ಯಾರ್ಥಿ, ಜರ್ನಿಯ ಸದಸ್ಯ ಮನೀಷ್ ಜೆ. ಪಿಂಟೋ, ನಾಟಕ ನಿರ್ದೇಶಕ ಚೇತನ್ ಗಣೇಶ್ ಪುರ, ಜರ್ನಿಯ ಶಶಾಂಕ್ ಐತಾಳ್ ಮತ್ತು ಮೇಘನಾ ಕುಂದಾಪುರ ಉಪಸ್ಥಿತರಿದ್ದರು.
ಬಳಿಕ ನಿಕೋಲಾಯ್ ಗೊಗೋಲ್ ನ “ದಿ ಗವರ್ನಮೆಂಟ್ ಇನ್ಸ್ಪೆಕ್ಟರ್” ನ್ನು ಕೆ. ವಿ. ಅಕ್ಷರ ಮತ್ತು ಕೆ. ವಿ. ಸುಬ್ಬಣ್ಣ ಕನ್ನಡ ಅನುವಾದಿಸಿದ “ಸಾಹೇಬರು ಬರುತ್ತಾರೆ” ನಾಟಕ ಪ್ರದರ್ಶನಗೊಂಡಿತು.
ಈ ನಾಟಕವನ್ನು ಯುವ ನಿರ್ದೇಶಕ ಚೇತನ್ ಗಣೇಶ್ ಪುರ ನಿರ್ದೇಶಿಸಿದ್ದರು. ನಾಟಕದಲ್ಲಿ ಮಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮೊದಲ ಬಾರಿಗೆ ರಂಗದಲ್ಲಿ ಅಭಿನಯಿಸಿದರು. ರಾಜೇಶ್ ಉಳ್ಳಾಲ್ ಧ್ವನಿ, ಶ್ರಾವಿಕ್ ಅಡ್ಕ ಬೆಳಕು, ವರುಣ್ ವಿ. ಆಚಾರ್ಯ ಸಂಗೀತ ನಿರ್ವಹಣೆ ಮತ್ತು ಚಿನ್ಮಯಿ ವಿ. ಭಟ್ ಹಾಗೂ ಮೇಘನಾ ಕುಂದಾಪುರ ಹಾಡಿನಲ್ಲಿ ಸಹಕರಿಸಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಸಹಯೋಗವನ್ನು ನೀಡಿತ್ತು.
ಜರ್ನಿ ಥೇಟರ್ ಗ್ರೂಪ್(ರಿ.) ಮಂಗಳೂರು



