ಮಂಗಳೂರು ; ಹೊರವಲಯದ ಸುರತ್ಕಲ್ನಲ್ಲಿರುವ ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ (MRPL) ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪ್ರಯಾಗ್ರಾಜ್ ಮೂಲದ ದೀಪ ಚಂದ್ರ ಭಾರ್ತಿಯಾ (33), ಕೇರಳದ ಬಿಜಿಲ್ ಪ್ರಸಾದ್ (33) ಮೃತಪಟ್ಟ ಕಾರ್ಮಿಕರು. ಇವರನ್ನು ರಕ್ಷಿಸಲು ಯತ್ನಿಸಿದ ಗದಗ ಮೂಲದ ವಿನಾಯಕ ಅಸ್ವಸ್ಥಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. MRPLನ ಒಎಂಎಸ್(ಆಯಿಲ್ ಮೂವ್ಮೆಂಟ್ ಸರ್ವಿಸ್)ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಮಿಕರು ಪರಿಶೀಲನೆಗೆ ತೆರಳಿದ್ದರು. ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದಾಗ ವಿಷಾನಿಲ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡ ದೀಪಚಂದ್ರ ಮತ್ತು ಬಿಜಿಲ್ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗದಗ ಮೂಲದ ವಿನಾಯಕ ಮಯಗೇರಿಗೆ ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಎಂಆರ್ಪಿಎಲ್ ಆಡಳಿತ ಮಂಡಳಿ ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತಮಟ್ಟದ ತನಿಖೆಗೆ ಸಮಿತಿ ರಚಿಸಿದೆ.