ಮೂಡುಬಿದಿರೆ: ಉಡುಪಿ- ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಪಟ್ಟಂತೆ ಸ್ಟೆರ್ಲೈಟ್ ಕಂಪನಿಯವರು ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ, ತೆಂಕಮಿಜಾರು ಗ್ರಾಮದ ಕೃಷಿ ಭೂಮಿಯನ್ನು ನಾಶ ಮಾಡಿದ್ದಲ್ಲದೆ ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯವೆಸಗಿದ ಸ್ಟೆರ್ ಲೈಟ್ ವಿದ್ಯುತ್ ಕಂಪೆನಿ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಪ್ರತಿಭಟನೆ ನಡೆಸಿದ್ದಾರೆ.
ಅಶ್ವತ್ಥಪುರ ಸೀತಾರಾಮ ದೇವಸ್ಥಾನದ ಬಳಿ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಕಂಪೆನಿ ವಿರುದ್ಧ ಜಾಥಾ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡುಬಿದಿರೆ ತಾಲೂಕು ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆದ ಈ ಪ್ರತಿಭಟನೆಯ ನೇತೃತ್ವವನ್ನು ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆಯವರು ವಹಿಸಿದ್ದರು.
“ರೈತರ ಮೇಲಿನ ದೌರ್ಜನ್ಯ ನಿಲ್ಲಲಿ, ಭೂಮಿ ಉಳಿಸಿ,ಬದುಕಲು ಬಿಡಿ” ಎಂಬ ಘೋಷವಾಕ್ಯದೊಂದಿಗೆ ಅಶ್ವತ್ಥಪುರ ದೇವಸ್ಥಾನದಿಂದ ಒಂಟಿಮಾರ್ ವರೆಗೆ ಜಾಥಾ ನಡೆಯಿತು.
ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಜಾಥಾವನ್ನು ಉದ್ಘಾಟಿಸಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಕಟೀಲು ದೇವಸ್ಥಾನದ ಅನಂತ ಅಸ್ರಣ್ಣ,ರೈತ ಸಂಘದ ರಾಜ್ಯ ಮುಖಂಡ ನಾರಾಯಣ ಸ್ವಾಮಿ, ಸುಚರಿತ ಶೆಟ್ಟಿ, ಕೃಷ್ಷಪ್ರಸಾದ್ ತಂತ್ರಿ, ಗ್ರಾ.ಪಂ.ಅಧ್ಯಕ್ಷೆ ಶಾಲಿನಿ, ಪ್ರವೀಣ್ ಭಂಡಾರಿ, ವಸಂತ ಭಟ್, ರವಿರಾಜ್, ಸುರೇಶ್ ಶೆಟ್ಟಿ ದೋಟ, ಬಾಲಕೃಷ್ಣ ದೇವಾಡಿಗ,ಭಾಸ್ಕರ ಶೆಟ್ಟಿ,ಅಲ್ಫೋನ್ಸ್ ನಿಡ್ಡೋಡಿ, ಕೃಷ್ಣಮೂರ್ತಿ ಮತ್ತಿತರರು ಈ ಜಾಥಾದಲ್ಲಿ ಭಾಗವಹಿಸಿದ್ದರು.

