ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್ ಮತ್ತು ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ವತಿಯಿಂದ ಹಿಂದೂ ಸಮಾಜದ ಐಕ್ಯತೆಗಾಗಿ ಸುಮಾರು 500 ವರ್ಷಗಳಿಂದ ಕಾರ್ಕಳದ ಪರ್ಪಲೆಗಿರಿಯಲ್ಲಿ ನೆಲೆಸಿರುವ ಶ್ರೀ ಕಲ್ಕುಡ, ಕಲ್ಲುರ್ಟಿ ಮತ್ತು ತೂಕತ್ತರೀ ಧರ್ಮದೈವಗಳ ಶಿಲಾಮಯ’ ಗರ್ಭಗೃಹ ಸಮರ್ಪಣೆ ಮತ್ತು ದೈವ ಬಿಂಬ ಪುನರ್ ಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ವೈಭವದ ‘ಸಿರಿಸಿಂಗಾರ ನೇಮೋತ್ಸವ ಮೇ 17ರಿಂದ ಮೇ 19ರ ವರೆಗೆ ಜರುಗಲಿದೆ.
ಕಾರ್ಯಕ್ರಮಗಳು: ಮೇ 17ರಂದು ಮಧ್ಯಾಹ್ನ 3 ಗಂಟೆಗೆ ಬಂಡಿಮಠ ಶ್ರೀ ಮೂಡು ಮಹಾಗಣಪತಿ ದೇವರ ಸಾನಿಧ್ಯದಿಂದ ಪರ್ಪಲೆಗಿರಿವರೆಗೆ ವೈಭವದ ಹಸಿರು ಕಾಣಿಕೆ ಮೆರವಣಿಗೆ, 18ರಂದು ಸಂಜೆ 5 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು, 19ರಂದು ಕಾರ್ಕಳದ ಅತ್ತೂರಿನ ಪರ್ಪಲೆಗಿರಿಯಲ್ಲಿ ನೆಲೆಸಿ ಭಕ್ತರನ್ನು ಅನುಗ್ರಹಿಸುವ ಶ್ರೀ ಗೌರಿಶಂಕರ ದೇವರ ಪರಿವಾರ ಸಾನಿಧ್ಯಗಳಾದ ನಾಗ, ರಕೇಶ್ವರೀ, ಪಂಜುರ್ಲಿ, ಕಲ್ಕುಡ, ಕಲ್ಲುರ್ಟಿ ಮತ್ತು ತೂಕತ್ತರಿ ದೈವಗಳ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವ ಪುನರ್ ಪ್ರತಿಷ್ಠೆ ಸಾನಿಧ್ಯ ಕಲಶೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ 4 ಗಂಟೆಗೆ ದೈವಗಳ ಭಂಡಾರ ಇಳಿದು, ವೈಭವದ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ.
ಹಿನ್ನೆಲೆ
ಕರಿಯಕಲ್ಲಿನ ಮೇಲೆ ತಲೆಎತ್ತಿ ನಿಂತಿರುವ ಸಂಸ್ಕೃತಿ ಸಂಸ್ಕಾರಗಳನ್ನು ಎಲ್ಲೆಡೆ ಪಸರಿಸಿದ ಕೀರ್ತಿಗೆ ಕಾರ್ಕಳದ ಪುಣ್ಯಭೂಮಿ ಸಾಕ್ಷಿಯಾಗಿದೆ. ಇಲ್ಲಿರುವ ದೇವಸ್ಥಾನ, ದೈವಸ್ಥಾನಗಳು ವಿಶ್ವದ ಎಲ್ಲೆಡೆ ಹೆಸರು ಪಡೆದಿವೆ. ಕಾರ್ಕಳದ ದಾನಶಾಲೆ ಬಳಿಯ ಬೆಟ್ಟದಲ್ಲಿ 1432ನೇ ಸಾಲಿನಲ್ಲಿ ನಿರ್ಮಾಣಗೊಂಡ ಬಾಹುಬಲಿ ಮೂರ್ತಿ ಜಗತ್ಪಸಿದ್ದವಾಗಿದೆ. ಹೀಗೆ ಇಲ್ಲಿರುವ ಧಾರ್ಮಿಕ ಕ್ಷೇತ್ರಗಳು ಕಾರ್ಕಳದ ಘನತೆಯನ್ನು ಎತ್ತಿ ಹಿಡಿದಿದ್ದು, ಪ್ರವಾಸಿ ತಾಣವಾಗಿಯೂ ಜನತೆಯನ್ನು ಆಕರ್ಷಿಸುತ್ತಿದೆ.
ಇದೀಗ ಕಾರ್ಕಳ ಪೇಟೆಯ ಅನತಿ ದೂರದಲ್ಲಿರುವ ಅತ್ತೂರು ಪರ್ಪಲೆಗಿರಿಯಲ್ಲಿ ಕಲ್ಕುಡ, ಕಲ್ಲುರ್ಟಿ ಮತ್ತು ತೂಕತ್ತರೀ ಧರ್ಮದೈವಗಳು ಅನಾದಿ ಕಾಲದಿಂದ ನೆಲೆಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ತಮ್ಮ ಇರುವಿಕೆಯನ್ನು ತೋರಿಸಿವೆ. ಊರ ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ಸುಂದರವಾದ ಗುಡಿ ಗೋಪುಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಇದೀಗ ಪುನರ್ ಪ್ರತಿಷ್ಠೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮದಲ್ಲಿದ್ದು ಸಹಸ್ರಾರು ಸಂಖ್ಯೆಯ ಭಕ್ತಾದಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ.