ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ದೇಶಸೇವೆಯ ಕಾರ್ಯದಲ್ಲಿ ಶತಮಾನ ಕಂಡಿರುವುದು ಸಂತಸ ತಂದಿದೆ. ಹಿಂದುತ್ವದ ರಕ್ಷಣೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಆರ್ ಎಸ್ ಎಸ್ ನಿಸ್ವಾರ್ಥ ಸೇವೆಯಿಂದ ವಿಶ್ವದಲ್ಲಿ ಭಾರತ ಇನ್ನಷ್ಟು ಬೆಳಗಲಿ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾರೈಸಿದರು.
ಕೃಷ್ಣಮಠಕ್ಕೆ ಬುಧವಾರ ಭೇಟಿ ನೀಡಿದ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅನುಗ್ರಹ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ಸಾಧನೆಯ ಮಾರ್ಗದಲ್ಲಿ ಸಾಗುತ್ತಿರುವಾಗ ಟೀಕೆ-ಟಿಪ್ಪಣಿಗಳು ಎದುರಾಗುವುದು ಸಹಜ. ಆರ್ ಎಸ್ ಎಸ್ ಧ್ಯೇಯೋದ್ದೇಶ ಎಂದಿಗೂ ಸಕಾರಾತ್ಮಕವಾಗಿಯೇ ಇದೆ. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಯಾವುದೇ ಪ್ರಚಾರ ಬಯಸದೆ, ಫಲಾಪೇಕ್ಷೆ ಇಲ್ಲದೆ ನೊಂದವರ ಸೇವೆ ಮಾಡುವುದನ್ನು ಕಂಡಿದ್ದೇವೆ. ಆರ್ ಎಸ್ ಎಸ್ ಮೂಲಕ ಎಲ್ಲ ಕುಟುಂಬಗಳಲ್ಲೂ ಸಂಸ್ಕಾರ ವೃದ್ಧಿಸಲಿ. ತನ್ಮೂಲಕ ರಾಷ್ಟ್ರೀಯ ಹಿತಾಸಕ್ತಿ ಜಾಗೃತವಾಗಲಿ ಎಂದು ಶ್ರೀಗಳು ಹಾರೈಸಿದರು.
ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೌರವಿಸಿದರು. ಆರ್ ಎಸ್ ಎಸ್ ನಗರ ಚಾಲಕ್ ಮಟ್ಟು ಲಕ್ಷಿ$್ಮನಾರಾಯಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳಿಂದ ಹೊಸಬಾಳೆ ಅವರು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದರು.
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.