ಉಡುಪಿ : ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮುಂದುವರಿದ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ತೀರದಲ್ಲೂ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ದ.ಕ. ಮತ್ತು ಉಡುಪಿ ಮೀನುಗಾರ ಬೋಟುಗಳಿಗೆ ಅಗತ್ಯ ಎಚ್ಚರಿಕೆಯ ಸಂದೇಶವನ್ನು ಈಗಾಗಲೇ ಕರಾವಳಿ ಕಾವಲು ಪಡೆ ಹಾಗೂ ಕೋಸ್ಟ್ಗಾರ್ಡ್ ನಿಂದ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಬೋಟುಗಳಲ್ಲಿರುವ ಮೀನುಗಾರರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಮಾಹಿತಿ ರವಾನೆಗೆ ನಿರ್ದೇಶನ ನೀಡಲಾಗಿದೆ. ಮಲ್ಪೆ, ಗಂಗೊಳ್ಳಿ, ಮಂಗಳೂರು ಸಹಿತ ಪ್ರಮುಖ ಬಂದರುಗಳಲ್ಲಿ ಹೊರ ಹೋಗುವ ಮತ್ತು ಒಳಗೆ ಬರುವ ಹೊರ ರಾಜ್ಯದ ಬೋಟುಗಳ ಮೇಲೆಯೂ ನಿಗಾ ಇರಿಸಲಾಗಿದೆ.
ಕರಾವಳಿ ಕಾವಲು ಪಡೆಯ ಪೊಲೀಸರು ಭದ್ರತ ಪಡೆಯೊಂದಿಗೆ ಸಮನ್ವಯ ಸಾಧಿಸಿ ನಿರಂತರ ಸಮುದ್ರ ಗಸ್ತು ನಡೆಸುತ್ತಿದ್ದಾರೆ. ಸುಮಾರು 10 ಬೋಟುಗಳಲ್ಲಿ ಮೂರು ಜಿಲ್ಲೆಗಳ 160 ಲ್ಯಾಂಡಿಂಗ್ ಪಾಯಿಂಟ್ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

