ಮಲ್ಪೆ: ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವವು ಕೊಳೆತ ಸ್ಥಿತಿಯಲ್ಲಿ ಕಲ್ಮಾಡಿ ಸೇತುವೆ ಸಮೀಪ ಪಾಪನಾಶಿನಿ ನದಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿ ಸುರೇಶ್ ಪೂಜಾರಿ (55) ಸುಬ್ರಹ್ಮಣ್ಯನಗರ ಅಂಬಾಗಿಲಿನ ನಿವಾಸಿ. ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಫೆ. 23ರಂದು ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿಯ ಕಾರು ಶೋರೂಮ್ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದ ಅವರು 9 ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಇವರು ಮಾನಸಿಕ ಖಿನ್ನತೆಗೆ ಔಷಧ ಸೇವನೆ ಮಾಡುತ್ತಿದ್ದರು.
ಕಳೇಬರವನ್ನು ಮೇಲಕ್ಕೆತ್ತುವ ಮತ್ತು ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸುವ ಕಾರ್ಯಾಚರಣೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ನಡೆಸಿದ್ದಾರೆ. ಮಲ್ಪೆಯ ಶಬೀರ್, ಮುಸ್ತಾಕ್ ನೆರವಾಗಿದ್ದರು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

