ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ರವರು ರಾಜ್ಯ ಬಜೆಟ್ ಅಧಿವೇಶನದಲ್ಲಿ ಮಾಸಾಶನ (ಪಿಂಚಣಿ) ಯೋಜನೆಗಳಿಗೆ ಸಂಬಂಧಿಸಿದ ಮಹತ್ವದ ಸಮಸ್ಯೆಯನ್ನು ಸದನದ ಗಮನಕ್ಕೆ ತಂದಿದ್ದಾರೆ.
ಮಾಸಾಶನ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 32,000 ಆಗಿರುವುದರಿಂದ ಅನೇಕ ಅರ್ಹ ಬಡ ಕುಟುಂಬಗಳು ಯೋಜನೆಯ ಲಾಭದಿಂದ ವಂಚಿತರಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಸ್ತುತ ಮಾಸಾಶನ ಪಡೆಯುತ್ತಿರುವ ಜಿಲ್ಲೆಯ 50,000 ಜನರು ಮತ್ತು ರಾಜ್ಯದ 24 ಲಕ್ಷಕ್ಕೂ ಹೆಚ್ಚು ಜನ ಮಾಸಾಶನ ಕಳೆದು ಕೊಳ್ಳುವ ಭೀತಿಯಲ್ಲಿದ್ದು, ಸದ್ರಿ ಮಾಸಾಶನದ ಮಿತಿಯನ್ನು ಹೆಚ್ಚಿಸುವ ಅಗತ್ಯತೆಯಿದೆ.
ಈ ಹಿನ್ನೆಲೆಯಲ್ಲಿ, ಮಾಸಾಶನದ ಆದಾಯ ಮಿತಿಯನ್ನು ರೂ. 32,000 ದಿಂದ ರೂ. 1,20,000ಕ್ಕೆ ಹೆಚ್ಚಿಸಲು ಸರ್ಕಾರವನ್ನು ಒತ್ತಾಯಿಸಿ, ಸದನದ ಗಮನ ಸೆಳೆದರು.
ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ದಿನ ವೇತನವೇ 370 ರೂಪಾಯಿ ಇದೆ, ತೀರ ಅವೈಜ್ಞಾನಿಕವಾಗಿರುವ ಈ ಹಿಂದಿನ 32 ಸಾವಿರ ಆದಾಯ ಮಿತಿಯನ್ನು ಏರಿಕೆ ಮಾಡದಿದ್ದಲ್ಲಿ ಬಡ ವಿಧವೆಯರು, ಹಿರಿಯ ನಾಗರಿಕರು ಸರ್ಕಾರದ ಸಾಮಾಜಿಕ ಬದ್ಧತೆ ಯೋಜನೆಗಳಿಂದ ವಂಚಿತರಾಗಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಈ ಗಂಭೀರ ಸಮಸ್ಯೆಗೆ ಪರಿಹಾರ ನೀಡಬೇಕು ಆದಾಯ ಮಿತಿ ಹೆಚ್ಚಳ ಮಾಡುವವರೆಗೆ ಪ್ರಸ್ತುತ ನಡೆಸುತ್ತಿರುವ ಪಿಂಚಣಿ ಪರಿಶೀಲನೆ ಮತ್ತು ರದ್ದತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

