ಮೂಡುಬಿದಿರೆ : ಬಡಗಮಿಜಾರು ಗ್ರಾಮದ ಮಂಜನಬೈಲಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈತ ಮುಖಂಡ ಅಲೋನ್ಸ್ ಡಿ’ಸೋಜ ಅವರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಮೂಡುಬಿದಿರೆ ಪೊಲೀಸ್ ಠಾಣೆ ಎದುರು ರೈತರು ಧರಣಿ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಹಾಗೂ ವಕೀಲ ಶಾಂತಿ ಪ್ರಸಾದ್ ಹೆಗ್ಡೆ ಕಂಪೆನಿಯು ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಯ ಆದೇಶಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿದರು.
ರೈತರಿಗೆ ಪರಿಹಾರ ಮೊತ್ತವನ್ನು ಡೆಪಾಸಿಟ್ ಮಾಡಿದ ಬಳಿಕ ಮಾತ್ರ ಕಾಮಗಾರಿ ಮುಂದುವರಿಸಬೇಕು ಎಂದು ಆಗ್ರಹಿಸಿದರು. ರೈತರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಸಂತ್ರಸ್ತ ರೈತರನ್ನು ಬಂಧಿಸಿ ಸುಳ್ಳು ಪ್ರಕರಣ ದಾಖಲಿಸಿದರೆ ಅಥವಾ ಅನಾವಶ್ಯವಾಗಿ ಠಾಣೆಗೆ ಕರೆದುಕೊಂಡು ಬಂದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಈ ವೇಳೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಮುಖಂಡರು ಹಾಗೂ ಕಂಪೆನಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಕ್ರಮಗಳನ್ನು ಜಿಲ್ಲಾಧಿಕಾರಿ ಹಾಗೂ ಕಮಿಷನರ್ ಸಮಕ್ಷಮದಲ್ಲಿ ಮಾತುಕತೆ ನಡೆಸಿದ ಬಳಿಕವೇ ಕೈಗೊಳ್ಳಬೇಕೆಂದು ಸೂಚಿಸಲಾಯಿತು.
ಈ ಬಗ್ಗೆ ಸಂಸದ ಬ್ರಿಜೇಶ್ ಚೌಟಿ ಅವರು ಪೊಲೀಸ್ ಇಲಾಖೆ ಹಾಗೂ ಕಂಪೆನಿಗೆ ತಾಕೀತು ಮಾಡಿದರೆಂದು ತಿಳಿದುಬಂದಿದೆ. ಧರಣಿಯಲ್ಲಿ ವಲೇರಿಯನ್ ಕುಟಿನ್ಹಾ ರಾಜೇಶ್ ಕಾಳೂರು, ರಾಧಾಕೃಷ್ಣ ಶೆಟ್ಟಿ, ಹೊನ್ನಪ್ಪ ಗೌಡ, ನೇಮಿರಾಜ್, ಇನ್ನಾ ಚಂದ್ರಹಾಸ ಶೆಟ್ಟಿ, ಜಾಕಿಂ ಕೊರೆಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

