ಮೂಡುಬಿದಿರೆ : ಇಲ್ಲಿನ ಹಳೆ ಪೊಲೀಸ್ ಠಾಣೆ ಬಳಿಯಲ್ಲಿರುವ ಗ್ಯಾರೇಜನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ ಶೆಟ್ಟಿ, ಪ್ರಥ್ವಿರಾಜ್, ರಾಜೇಶ್ ಆಚಾರ್ಯ ಸಹಿತ 13 ಜನರ ವಿರುದ್ಧ ಮೂಡುಬಿದಿರೆ ಪೊಲೀಸರು ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡ್ಡಿದ್ದಾರೆ.
ಪ್ರಾಂತ್ಯ-ಮಾರ್ಪಾಡಿ ಗ್ರಾಮದಲ್ಲಿ ಯಶೋಧರ ಮತ್ತು ಇತರರ ಮಾಲಿಕತ್ವದಲ್ಲಿರುವ ಡೋರ್ ನಂಬ್ರ 8-152 ಮತ್ತು 8-153ರಲ್ಲಿ ಮೆಕ್ಯಾನಿಕ್ ವೃತ್ತಿಯ ಪುಷ್ಪರಾಜ್ ಎಂಬವರು ಬಾಡಿಗೆಗೆ ಗ್ಯಾರೇಜನ್ನು ನಡೆಸಿಕೊಂಡಿದ್ದರು. ಈ ಅಂಗಡಿ ಕೋಣೆಯ ಬಗ್ಗೆ ಮೂಡುಬಿದಿರೆ ನ್ಯಾಯಾಲಯ ದಲ್ಲಿ ಸಿವಿಲ್ ದಾವೆ ದಾಖಲಾಗಿದ್ದು ಈ ದಾವೆಯ ಅಂತಿಮ ಇತ್ಯರ್ಥವಾಗದೆ ಬಾಡಿಗೆದಾರರನ್ನು ಹೊರಹಾಕದಂತೆ ನ್ಯಾಯಾಲಯ ತಾತ್ಕಾಲಿಕ ಆದೇಶವನ್ನು ಮಾಡಿದ್ದು ಪ್ರಕರಣವು ವಿಚಾರಣೆ ಹಂತದಲ್ಲಿದೆ.
ಆದರೆ ಫೆ. 15ರಂದು ಆರೋಪಿಗಳು ಗ್ಯಾರೇಜ್ ಗೆ ಅಕ್ರಮ ಪ್ರವೇಶ ಮಾಡಿ ಸಲಕರಣೆಗಳನ್ನು ಮತ್ತು ಸಂಬಳ ನೀಡಲು ಇಟ್ಟಿದ್ದ ರೂ. 22 ಸಾವಿರವನ್ನು ಒಯ್ದಿದ್ದು, ಅಲ್ಲದೆ ಜೆಸಿಬಿ ಬಳಸಿ ಗ್ಯಾರೇಜನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭ ಪುಷ್ಪರಾಜ್ ಅವರ ಜತೆ ಕೆಲಸ ಮಾಡುತ್ತಿದ್ದ ನಾಗೇಶ್, ರಮೇಶ್ ಮತ್ತು ವಿಜಯಕುಮಾರ್ ಅಲ್ಲಿಗೆ ತೆರಳಿದ್ದು ಈ ವೇಳೆ ಆರೋಪಿಗಳು ನಾಗೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಅಲ್ಲದೆ ಗ್ಯಾರೇಜಿನ ಸಲಕರಣೆಗಳನ್ನು ಧ್ವಂಸ ಮಾಡಿರುವುದರಿಂದ ಸುಮಾರು 50 ಸಾವಿರ ರೂ ನಷ್ಟ ಉಂಟಾಗಿರುವ ಬಗ್ಗೆಯೂ ಕೇಸು ದಾಖಲಿಸಿದ್ದಾರೆ.

