ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೂಡಬಿದ್ರೆ ತಾಲೂಕು ಪಂಚಾಯತ್, ಯುವಜನ ಒಕ್ಕೂಟ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದರೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಗಸ್ಟ್ 31ರಂದು ತಾಲೂಕು ಕ್ರೀಡಾಂಗಣ ಸ್ವರಾಜ್ ಮೈದಾನದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಕ್ರೀಡಾ ಅನುದಾನವನ್ನು ಸದ್ವಿನಿಯೋಗ ಮಾಡಲಾಗಿದೆ. ಕ್ರೀಡಾಂಗಣದ ವೀಕ್ಷಕರ ಗ್ಯಾಲರಿಯ ಮೇಲ್ಚಾವಣಿಯ ಕೆಲವು ಶೀಟ್ ಗಳು ಹಾರಿ ಹೋಗಿದ್ದು ಸದ್ಯದಲ್ಲಿಯೇ ಅದನ್ನು ಸರಿಪಡಿಸಿ ಕೊಡುವ ಭರವಸೆಯನ್ನು ನೀಡಿದರು. ಕ್ರೀಡಾಂಗಣದ ನಿರ್ವಹಣೆಯನ್ನು ಮಾಡುತ್ತಿರುವ ಡಾ ಮೋಹನ್ ಆಳ್ವ ಅವರ ಪ್ರಯತ್ನವನ್ನು ಪ್ರಶಂಸಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಪುರಸಭಾ ಅಧ್ಯಕ್ಷೆ ಜಯಶ್ರೀ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಜಿಲ್ಲಾ ಯುವಜನ ಕ್ರೀಡಾ ಇಲಾಖೆಯ ಸರಸ್ವತಿ ಪುತ್ರನ್, ನಾಗೇಶ್ ಹಾಜರಿದ್ದರು. ಕ್ರೀಡಾಕೂಟದ ನೋಡಲ್ ಅಧಿಕಾರಿ ನವೀನ್ ಚಂದ್ರ ಅಂಬೂರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಐದು ಸಾವಿರ ಕಿಲೋಮೀಟರ್ ಓಡಿ ಪ್ರಶಸ್ತಿ ಪಡೆದ ಕ್ರೀಡಾಳುಗಳನ್ನು ಅಭಿನಂದಿಸಲಾಯಿತು.

