ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡುಬಿದಿರೆಯ ಯುವವಾಹಿನಿ ತಂಡ ಮೂಡುಮಾರ್ನಾಡು ಗ್ರಾಮದ ಸುಮಿತ್ರಾ- ವಿಶ್ವನಾಥ್ ದಂಪತಿಯ ಮನೆಯನ್ನು ಸುಮಾರು 6 ಲಕ್ಷ ರೂ.ವೆಚ್ಚದ ಯೋಜನೆ ರೂಪಿಸಿ ದುರಸ್ತಿ ಮಾಡಲು ಶಿಲಾನ್ಯಾಸ ನೆರವೇರಿಸಿದೆ.
ಯುವವಾಹಿನಿ ಯ ಮಾಜಿ ಅಧ್ಯಕ್ಷ, ಯುವವಾಹಿನಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಎ.ಕೋಟ್ಯಾನ್ ಯೋಜನೆಯಂತೆ ಯುವವಾಹಿನಿಯ ಸಕ್ರಿಯ ಸದಸ್ಯೆ ‘ಸುಮಿತ್ರಾ ಅವರ ಮನೆ ಶೋಚನೀಯ ಸ್ಥಿತಿಯಲ್ಲಿರುವುದು ಗಮನಿಸಿ ಮರು ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಕೂಡಲೇ ಈ ಯೋಜನೆಯನ್ನು ಕೈಗೊಂಡು ಶಿಲಾನ್ಯಾಸ ನೆರವೇರಿಸಲಾಗಿದೆ, ಸುಮಾರು 600 ಚದರ ಅಡಿ ವಿಸ್ತೀರ್ಣದ ಮನೆಯನ್ನು ಮರುನಿರ್ಮಾಣ ಮಾಡಿಕೊಡುವ ಮಹತ್ವದ ನಿರ್ಣಯ ನಮ್ಮದು’ ಎಂದು ಶಂಕರ್ ಕೋಟ್ಯಾನ್ ತಿಳಿಸಿದ್ದಾರೆ.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ವಾಸುದೇವ ಭಟ್ ಪ್ರಾರ್ಥನೆ ಸಲ್ಲಿಸಿ ಶಿಲಾನ್ಯಾಸ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಪಡುಮಾರ್ನಾಡು ಗ್ರಾ.ಪಂ.ಸದಸ್ಯ ರಮೇಶ್ ಶೆಟ್ಟಿ ಅವರು ರೂ.10,000 ಹಾಗೂ ಹಿರಿಯರಾದ ಮೋಹನ್ ಕೋಟ್ಯಾನ್ ರೂ.3000 ದೇಣಿಗೆ ನೀಡಿ ಶುಭ ಹಾರೈಸಿದರು.
ವಾಸುದೇವ ಭಟ್ ಅವರು ರೂ.5000 ದೇಣಿಗೆ, ಘಟಕದ ಗೌರವ ಸಲಹೆಗಾರ ಸುರೇಶ್ ಕೋಟ್ಯಾನ್ ಒಂದು ಲೋಡ್ ಜಲ್ಲಿ,ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ ಅವರು ಈ ಮನೆಗೆ ಸಂಪೂರ್ಣ ಟೈಲ್ಸ್ ಒದಗಿಸುವ ಭರವಸೆ ನೀಡಿದರು. ಘಟಕದ ಪದಾಧಿಕಾರಿಗಳಾದ ವಿಧೇಶ್ ಎಂ, ಗಿರೀಶ್ ಕೋಟ್ಯಾನ್, ಜಯಶೀಲಾ,ಶೋಭಾ ದಿನೇಶ್, ಗುತ್ತಿಗೆದಾರ ಬಾಲಕೃಷ್ಣ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

