ಮುದ್ರಾಡಿ ಧರ್ಮಯೋಗಿ ಮೋಹನ್ ಸ್ವಾಮೀಜಿಯವರ 4ನೇ ಆರಾಧನಾ ಮಹೋತ್ಸವ ಮುದ್ರಾಡಿ ಶ್ರೀ ಕ್ಷೇತ್ರಕ್ಕೆ ಅದ್ಭುತ ಶಕ್ತಿಯಿದೆ : ಶ್ರೀ ವಿನಯ ಗುರೂಜಿ

0
37

ಮುದ್ರಾಡಿ : ನಮ್ಮ ವಿವಿಧ ಧರ್ಮದ ಆಚರಣೆಗಳು ಬೇರೆಯಾದರೂ ಉದ್ದೇಶ ಒಂದೇ ಜಗತ್ತಿಗೆ ಒಳಿತು ಮಾಡುವ ಬೆಳಕು ನೀಡುವುದು, ಮುದ್ರಾಡಿ ಶ್ರೀಕ್ಷೇತ್ರವು ಅಂತಹ ಮಹತ್ವದ ಕಾರ್ಯವನ್ನು ನಡೆಸುತ್ತಿದೆ, ಮುದ್ರಾಡಿ ಕ್ಷೇತ್ರಕ್ಕೆ ಅದ್ಭುತ ಶಕ್ತಿಯಿದೆ, ಧರ್ಮ ಯೋಗಿ ಮತ್ತು ಕರ್ಮಯೋಗಿಯಾಗಿದ್ದ ಮೋಹನ ಸ್ವಾಮೀಜಿಯಿಂದ ಕ್ಷೇತ್ರವು ಬೆಳಗುತ್ತಿದೆ ಎಂದು ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಹೇಳಿದರು.

ಅವರು ಹೆಬ್ರಿಯ ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಧರ್ಮಯೋಗಿ ಮೋಹನ ಸ್ವಾಮೀಜಿಯವರ 4ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಧರ್ಮಯೋಗಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಜಾತಿ ಮತ ಧರ್ಮವನ್ನು ನಾವು ಪ್ರೀತಿಸುತ್ತೇನೆ ಆಗ ಮಾತ್ರ ಧರ್ಮ ಬೆಳೆಯುತ್ತದೆ. ಕರಾವಳಿ ಜಿಲ್ಲೆ ತುಳುನಾಡಿನಲ್ಲಿ ನಾಗರಾಧನೆ ಮತ್ತು ದೈವರಾಧನೆಯ ಮೂಲಕ ಒಗ್ಗಟ್ಟು ಇದೆ, ಅದು ಸದೃಡ ಕುಟುಂಬದ ವ್ಯವಸ್ಥೆಗೆ ಕಾರಣವಾಗಿದೆ ಆ ಮೂಲಕ ಸಂಘಟಿತ ಸಮಾಜ ನಿರ್ಮಾಣವಾಗಿದೆ ಎಂದು ವಿನಯ ಗುರೂಜಿ ಹೇಳಿದರು.

ಮುಖಂಡ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಸರ್ವ ಧರ್ಮದವರೂ ಕೂಡ ಬಂದು ಸೇವೆ ಸಲ್ಲಿಸುವ ವೈಶಿಷ್ಯ ಕ್ಷೇತ್ರ ಮುದ್ರಾಡಿ ಎಂದರು.
ಅಧ್ಯಕ್ಷತೆ ವಹಿಸಿದ ಧಾರ್ಮಿಕ ಮುಖಂಡ ಬಜಗೋಳಿ ರವೀಂದ್ರ ಶೆಟ್ಟಿ ಮಾತನಾಡಿ ಮುದ್ರಾಡಿ ಕ್ಷೇತ್ರವನ್ನು ಬೆಳಗಿಸಿದ ಧರ್ಮಯೋಗಿ ಮೋಹನ ಸ್ವಾಮೀಜಿ ಸಮಾಜದ ದೊಡ್ಡಶಕ್ತಿ, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕ್ಷೇತ್ರದ ಸೇವೆ ಮಾಡಲು ನನಗೂ ಅವಕಾಶ ದೊರೆತಿರುವುದು ಪುಣ್ಯ ಎಂದರು.

ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಧರ್ಮಯೋಗಿ ಮೋಹನ ಸ್ವಾಮೀಜಿಯವರ ೪ನೇ ವರ್ಷದ ಆರಾಧನಾ ಮಹೋತ್ಸವ ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಅಂಗದ ಸಂಧಾನ ನಡೆಯಿತು. ಕಲಾವಿದರಾದ ಉಜಿರೆ ಅಶೋಕ ಭಟ್ ಮತ್ತು ಗಣೇಶ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಿದರು.

ಶ್ರೀ ವಿನಯ್ ಗುರೂಜಿ ಅವರಿಗೆ ಪ್ರದಾನ ಮಾಡಿದ ಧರ್ಮಯೋಗಿ ಸಮ್ಮಾನವನ್ನು ಶ್ರೀ ಕ್ಷೇತ್ರ ಮುದ್ರಾಡಿಯನ್ನು ಬೆಳಗಿಸಲು ಮೋಹನ ಸ್ವಾಮೀಜಿಯವರ ಜೊತೆ ಶ್ರಮಿಸಿದ ಕಮಲ ಎಂಪಿ ಅವರಿಗೆ ಮರು ಪ್ರದಾನಿಸಿದರು.

ಧರ್ಮಯೋಗಿ ಸಮ್ಮಾನ್ ಪ್ರಥಮ ಪ್ರಶಸ್ತಿಯನ್ನು ಚಿಂತಕ ಕರ್ನಾಟಕ ಕ್ವಾರಿ ಕ್ರಶರ್ ಫೆಡರೇಶನ್ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಅವರಿಗೆ, ದ್ವಿತೀಯ ಪ್ರಶಸ್ತಿಯನ್ನು ಕೊಡುಗೈ ದಾನಿ ಮುಂಬಯಿಯ ಪ್ರಸಿದ್ದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಹಾಗೂ ತೃತೀಯ ಪ್ರಶಸ್ತಿಯನ್ನು ಉದ್ಯಮಿ ಕಲಾಪೋಷಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹೈದರಾಬಾದ್ ಅವರಿಗೆ ಪ್ರದಾನ ಮಾಡಲಾಗಿತ್ತು ಎಂದು ಶ್ರೀ ಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ ಮೋಹನ್ ತಿಳಿಸಿದರು.

ಧಾರ್ಮಿಕ ಮುಖಂಡ ಪ್ರವೀಣ್ ಭಟ್, ಶ್ರೀ ಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ ಮೋಹನ್, ಧರ್ಮದರ್ಶಿಗಳಾದ ಸುಧೀಂದ್ರ ಮೋಹನ್,.ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ಕಮಲ ಎಂಪಿ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಜಗದೀಶ ಜಾಲ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here