ಬಂಟ್ವಾಳ :ನಾರಾಯಣಗುರುಗಳು ಭಾರತದ ಸಾಮಾಜಿಕ ಪುನರ್ ನಿರ್ಮಾಣದ ಅಗ್ರಗಣ್ಯ ಧಾರ್ಮಿಕ ದಾರ್ಶನಿಕರು. ಅವರು ಜಾತಿ, ಧರ್ಮ, ಭಾಷೆ ಅಥವಾ ವರ್ಗದ ಭೇದವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಪ್ರತಿಪಾದಿಸಿದರು.
ನಾರಾಯಣಗುರುಗಳ ಶಿಕ್ಷಣದ ತತ್ವಗಳು ಮೌಲ್ಯಾಧಾರಿತವಾಗಿದ್ದವು. ಅವರು ತಿಳಿಸಿದಂತೆ, ನೈತಿಕತೆ, ಸತ್ಯ, ಸಹಾನುಭೂತಿ, ಸಹಿಷ್ಣುತೆ ಮತ್ತು ಪ್ರೀತಿಯಂಥ ಮಾನವೀಯ ಗುಣಗಳು ಶಿಕ್ಷಣದ ಕೇಂದ್ರವಾಗಿರಬೇಕು. ಅವರು ಶಿಕ್ಷಣವನ್ನು ಕೇವಲ ಪುಸ್ತಕದ ಪಾಠಗಳಾಗಿ ಕಾಣದೆ, ಜೀವನವನ್ನೇ ಬದಲಾಯಿಸುವ ಶಕ್ತಿಯಾಗಿ ನೋಡಿದರು.
ಈ ನಿಟ್ಟಿನಲ್ಲಿ ನಾರಾಯಣಗುರುಗಳು ಮಾನವೀಯ ಶಿಕ್ಷಣದ ಪ್ರೇರಕ ಶಕ್ತಿ ಎಂದು ಸಾಮಾಜಿಕ ಮುಂದಾಳು ಪ್ರಕಾಶ್ ಅಂಚನ್ ತಿಳಿಸಿದರು
ಅವರು ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯ ಪೃಥ್ವಿರಾಜ್ ಮಣಿಹಳ್ಳ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 46 ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ , ಸದಸ್ಯರಾದ ಯಶೋಧರ ಕಡಂಬಲ್ಕೆ, ಶ್ರವಣ್ ಬಿ.ಸಿರೋಡ್ ಮತ್ತಿತರರು ಉಪಸ್ಥಿತರಿದ್ದರು.
ಭಜನಾ ಸಂಕೀರ್ತನೆಯಲ್ಲಿ ಹಾರ್ಮೋನಿಯಂ ವಾದಕರಾಗಿ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ಸಾತ್ವಿಕ್ ದೇರಾಜೆ ಸಹಕರಿಸಿದರು.
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

