ನಕ್ಸಲ್ ಲಿಂಕ್ ಶಂಕೆ : ಶರಣ್ಯ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು

0
72

ಬೆಂಗಳೂರು : ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ದಾರಿ ತಪ್ಪಿದ್ದ ಕೇರಳದ ಶರಣ್ಯ ಎಂಬ ಯುವತಿ, ನಾಲ್ಕು ದಿನಗಳ ಕಾಲ ದಟ್ಟ ಕಾಡಿನಲ್ಲಿ ಕಳೆದ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆದರೆ, ಈ ಘಟನೆ ಈಗ ವಿವಾದಕ್ಕೆ ಈಡಾಗಿದೆ. ಆಕೆ ಪಬ್ಲಿಸಿಟಿಗಾಗಿ ಹೀಗೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶರಣ್ಯ, “ನಾನು ಪ್ರಾಣ ಉಳಿಸಿಕೊಳ್ಳಲು ಝರಿಗಳ ನೀರು ಕುಡಿದು ಬದುಕಿದೆನೇ ಹೊರತು, ಯಾವುದೇ ನಾಟಕ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ದಟ್ಟ ಕಾಡು ಮತ್ತು ಬೆಟ್ಟಗುಡ್ಡಗಳ ಮಧ್ಯೆ ಭರ್ತಿ ನಾಲ್ಕು ದಿನಗಳ ಕಾಲ ಕಳೆದ ಅವರು, ನಂತರ ಸುರಕ್ಷಿತವಾಗಿ ಹೊರಬಂದಿದ್ದರು. ಆರಂಭದಲ್ಲಿ ಇದು ಒಂದು ಪವಾಡ ಎಂದು ಎಲ್ಲರೂ ಹೇಳಿದರು.

ಸಂದರ್ಶನದಲ್ಲಿ ಶರಣ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಾಡಿನಲ್ಲಿ ಹರಿಯುವ ಝರಿಗಳ ನೀರನ್ನು ಕುಡಿದು ಜೀವ ಉಳಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಹಸಿವಿಗಿಂತ ಜೀವ ಉಳಿಸಿಕೊಂಡು ಹೊರಬರಬೇಕೆಂಬ ಹಠ ದೊಡ್ಡದಾಗಿತ್ತು, ಹಾಗಾಗಿ ಆಹಾರದ ನೆನಪು ಬರಲಿಲ್ಲ ಎಂಬುದು ಅವರ ವಾದ. ಜೀವ ಪಣಕ್ಕಿಟ್ಟು ನಾನು ಯಾವುದೇ ನಾಟಕ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುವತಿ ಸುರಕ್ಷಿತವಾಗಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸಂಶಯಗಳು ವ್ಯಕ್ತವಾಗಿವೆ. ದಟ್ಟ ಕಾಡಿನಲ್ಲಿ ನಾಲ್ಕು ದಿನ ಆಹಾರವಿಲ್ಲದೆ ಒಬ್ಬ ಯುವತಿ ಬದುಕುಳಿಯಲು ಸಾಧ್ಯವೇ? ಇದು ಪಬ್ಲಿಸಿಟಿ ಗಿಮಿಕ್ ಇರಬಹುದು ಎಂಬುದು ಒಂದು ಗುಂಪಿನ ವಾದ. ಆಕೆಗೆ ನಕ್ಸಲೈಟ್ ಸಂಪರ್ಕವಿರಬಹುದೇ ಎಂಬ ಗಂಭೀರ ಅಪವಾದಗಳು ಕೇಳಿಬರುತ್ತಿವೆ. ಆಕೆಯನ್ನು ಹುಡುಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ, ಈ ನಷ್ಟಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿದೆ.

ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೊಡಗಿನ ನಾಪೋಕ್ಲು ಬಿಜೆಪಿ ಘಟಕ ಮತ್ತು ಕೆಲವು ಯೂಟ್ಯೂಬರ್‌ಗಳು ಯುವತಿಯ ವಿರುದ್ಧ ದೂರು ನೀಡಿದ್ದಾರೆ. ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ದೂರು ನೀಡಲು ಶರಣ್ಯ ಅವರ ಮಾವ ಹರಿದಾಸ್ ಮತ್ತು ಕುಟುಂಬಸ್ಥರು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here