ಮುಂಬಯಿ: ಸರಕಾರಿ ನಿಯಮಗಳ ಅನ್ವಯ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಮೀಸಲಾದ ಉಚಿತ ಮತ್ತು ರಿಯಾಯಿತಿ ದರದ ವೈದ್ಯಕೀಯ ಸೇವೆಯನ್ನು ಆಸ್ಪತ್ರೆ ನಿರಾ ಕರಿಸುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಎನ್ಸಿಪಿ (ಎಸ್ಪಿ) ಮುಂಬಯಿ ಘಟಕದ ನಿಯೋಗವು ಅಂಧೇರಿ ಪೂರ್ವದಲ್ಲಿರುವ ಹೋಲಿ ಸ್ಪಿರಿಟ್ ಆಸ್ಪತ್ರೆಗೆ ಭೇಟಿ ನೀಡಿ, ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿತು. ಎನ್ಸಿಪಿ (ಎಸ್ಪಿ) ಮುಂಬಯಿ ಪ್ರದೇಶದ ಹಿರಿಯ ಉಪಾಧ್ಯಕ್ಷ ಹಾಗೂ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ. ಪೂಜಾರಿ ಚಿತ್ರಾಪು ನೇತೃತ್ವದ ನಿಯೋಗವು, ಆಸ್ಪತ್ರೆಯ ಹೊರಗೆ ಸರಕಾರಿ ಯೋಜನೆಗಳ ಕುರಿತು ಯಾವುದೇ ಮಾಹಿತಿ ಫಲಕ ಅಳವಡಿಸದಿರುವುದನ್ನು ಖಚಿತಪಡಿಸಿಕೊಂಡು, ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿಚಿಕಿತ್ಸೆ ನೀಡಲು 30 ಹಾಸಿಗೆಗಳನ್ನು ಮೀಸಲಿಡಬೇಕು.
ಮತ್ತು ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಈ ಕುರಿತ ದೊಡ್ಡ ಸೂಚನಾ ಫಲಕವನ್ನು ತತ್ ಕ್ಷಣ ಅಳವಡಿಸಬೇಕು ಎಂದು ಆಸ್ಪತ್ರೆಯ ಟ್ರಸ್ಟಿ ಹಾಗೂ ನಿರ್ದೇಶಕರನ್ನು ಆಗ್ರಹಿಸಿತು. ನಿಯೋಗದ ಸಲಹೆಯನ್ನು ಪರಿಗಣಿಸಿದ ಆಸ್ಪತ್ರೆಯ ಮುಖ್ಯಸ್ಥರು, ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಎಲ್ಲ ವಿಭಾಗಗಳ ಮುಖ್ಯಸ್ಥರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಲ್ಲದೆ, ರೋಗಿಗಳು, ವೈದ್ಯರು ಹಾಗೂ ಸಿಬಂದಿ ನಡುವೆ ಉತ್ತಮ ಸಂವಹನಕ್ಕಾಗಿ ಆಸ್ಪತ್ರೆಯಲ್ಲೇ ವೈದ್ಯಕೀಯ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸುವಂತೆ ನಿಯೋಗ ನೀಡಿದ ಸೂಚನೆಯನ್ನು ಆಸ್ಪತ್ರೆ ಆಡಳಿತ ಒಪ್ಪಿಕೊಂಡಿದೆ ಎಂದು ಲಕ್ಷ್ಮಣ ಪೂಜಾರಿ ತಿಳಿಸಿದರು.

