ಕುಂದಾಪುರ, ನ. 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಹೆಚ್ಚಾಗಿ ಸ್ಪರ್ಧಾತ್ಮಕವಾಗಿ ಆಯೋಜನೆಗೊಂಡರೆ, ಉಡುಪಿ ಜಿಲ್ಲೆಯಲ್ಲಿ ಪಾರಂಪರಿಕ ರೀತಿಯಲ್ಲಿ ಸಾಂಪ್ರದಾಯಿಕ ಕಂಬಳ ನಡೆದುಕೊಂಡು ಬರುತ್ತಿದೆ. ಈಗಾಗಲೇ ಕೆಲವೊಂದು ಕಂಬಗಳ ದಿನ ನಿಗದಿಯಾಗಿದ್ದು ನ. 16ರ ವೃಶ್ಚಿಕ ಸಂಕ್ರಮಣದಂದು ಬಹುತೇಕ ಸಾಂಪ್ರದಾಯಿಕ ಕಂಬಳಗಳ ದಿನವನ್ನು ಅಂತಿಮಗೊಳಿಸಲಾಗಿದೆ.
ಈ ವರ್ಷದ ಸಾಂಪ್ರದಾಯಿಕ ಕಂಬಳವು ನ.21ರಂದು ಕೊಡೇರಿಯ ಹಕ್ರೆಮಠದಲ್ಲಿನಡೆಯುವ ಕಂಬಳದೊಂದಿಗೆ ಮೊದಲ್ಗೊಳ್ಳಲಿದೆ. ಡಿ.30ರ ನಾವುಂದ ಕಂಬಳದೊಂದಿಗೆ ಸಂಪನ್ನಗೊಳ್ಳಲಿದೆ. ಈ ವರ್ಷ ನಡೆಯುವ ಒಟ್ಟು ಸಾಂಪ್ರದಾಯಿಕ 34 ಕಂಬಳಗಳ ದಿನವನ್ನುನಿಗದಿಪಡಿಸಲಾಗಿದೆಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯ ಅಧ್ಯಕ್ಷ ಸುಧಾಕರ ಹೆಗ್ಡೆ ಹೆರಿಂಜೆ ಹಾಗೂ ಬೈಂದೂರು ತಾಲೂಕು ಸಾಂಪ್ರದಾಯಿಕ ಮತ್ತು ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ತು ಅವರು ಮಾಹಿತಿ ನೀಡಿದ್ದಾರೆ.
ಸಂಕ್ರಮಣದಂದು ದಿನ ನಿಗದಿ: ಕಂಬಳ ನಡೆಸುವ ಬಹುತೇಕ ಮನೆತನಗಳೇ ವೃಶ್ಚಿಕ ಸಂಕ್ರಮಣ ದಿನ (216) ದಂದು ಆರ್ಚಕರ ಮನೆಗೆ ತೆರಳಿ, ಯಜಮಾನರ ತಾರಾಬಲಕ್ಕೆ ಅನುಕೂಲವಾಗಿ, ದಿನ ನಿಗದಿಪಡಿಸುವುದು ವಾಡಿಕೆ. ಸಾಂಪ್ರದಾಯಿಕ (ಪರಂಪರೆ) ಕಂಬಳವೆಂದರೆ ಎಲ್ಲರೂ ಪಾಲ್ಗೊಳ್ಳುವ, ಶ್ರದ್ದೆಯ ಆಚರಣೆ ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕೃಷಿಗೆ ಮಹತ್ವ ನೀಡುವ, ಮಹಿಷಂದಾಯ (ಕೋಣಗಳು) ಆರಾಧನೆ, ದೈವರಾಧನೆಯ ನೆಲೆಯಲ್ಲೂ ಈ ಕಂಬಳ ನಡೆಸಲಾಗುತ್ತಿದೆ. ದಿನ ನಿಗದಿಯಾದಂದಿನಿಂದ ಕಂಬಳ ಮುಗಿಯುವವರೆಗೆ ಕೆಲವೆಡೆ ಕಂಬಳ ನಡೆಸುವ ಯಜಮಾನ (ಪಟ್ಟದವರು) ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು.

