ಧಗಧಗಿಸುವ ಸೂರ್ಯ ಏರುತ್ತಿರುವ ತಾಪಮಾನ ಮತ್ತು ಮೈ ಸುಡುವ ಬೇಸಿಗೆ ಈ ಸಮಯದಲ್ಲಿ ದೇಹದಲ್ಲಿನ ನೀರಿನಂಶ ಕಡಿಮೆಯಾಗಿ ಸುಸ್ತು ಆವರಿಸುವುದು ಸಹಜ. ಮಾರುಕಟ್ಟೆಯ ಕೃತಕ ಪಾನೀಯಗಳ ಮೊರೆ ಹೋಗುವ ಬದಲು, ನೈಸರ್ಗಿಕವಾಗಿ ದೇಹವನ್ನು ತಂಪು ಮಾಡುವ ಪಾನ್-ಗುಲ್ಕಂದ್ ಶರಬತ್ ಈ ಬೇಸಿಗೆಯಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಆಗಲಿದೆ.
ಈ ಪಾನೀಯವು ಕೇವಲ ದಾಹ ತೀರಿಸುವ ಸಾಧನವಲ್ಲ; ಇದು ರುಚಿ ಮತ್ತು ಆರೋಗ್ಯದ ಅದ್ಭುತ ಸಂಯೋಜನೆ. ವೀಳ್ಯದೆಲೆಯ ಹಗುರವಾದ ಕಹಿಯ ಅಂಶ ಮತ್ತು ಗುಲ್ಕಂದ್ನ ಸಿಹಿ ಸೇರಿ ಒಂದು ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ಇದಕ್ಕೆ ಸೇರಿಸುವ ಏಲಕ್ಕಿ ಮತ್ತು ಸೋಂಪು ಪಾನೀಯಕ್ಕೆ ಅದ್ಭುತವಾದ ಪರಿಮಳವನ್ನು ನೀಡುತ್ತದೆ. ಒಂದು ಗ್ಲಾಸ್ ಕುಡಿದರೆ ಸಾಕು, ಮನಸ್ಸು ತಕ್ಷಣವೇ ರಿಫ್ರೆಶ್ ಆಗುತ್ತದೆ.
ಹಿರಿಯರು ಬಳಸುತ್ತಿದ್ದ ಪದಾರ್ಥಗಳಲ್ಲಿ ಆರೋಗ್ಯದ ಗುಟ್ಟು ಅಡಗಿದೆ, ವೀಳ್ಯದೆಲೆಗಳು ನೈಸರ್ಗಿಕವಾಗಿ ದೇಹಕ್ಕೆ ತಂಪು ನೀಡುವ ಗುಣವನ್ನು ಹೊಂದಿವೆ. ಬಿಸಿಲ ಬೇಗೆಯಿಂದ ದೇಹವನ್ನು ಕಾಪಾಡುತ್ತದೆ. ಗುಲ್ಕಂದ್ (ಗುಲಾಬಿ ದಳಗಳಿಂದ ತಯಾರಿಸಿದ್ದು) ಹೊಟ್ಟೆಯನ್ನು ತಂಪಾಗಿಡುವುದಲ್ಲದೆ, ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಇದರಲ್ಲಿ ಬಳಸುವ ಸೋಂಪು ಮತ್ತು ಏಲಕ್ಕಿ ಹೊಟ್ಟೆಯ ಉರಿಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ.
ತಯಾರಿಸಲು ಬೇಕಾಗುವ ಪದಾರ್ಥಗಳು : ವೀಳ್ಯದೆಲೆ: 15-20 (ತಾಜಾ ಎಲೆಗಳು),ಸೋಂಪು: ಅರ್ಧ ಕಪ್ (ಸಣ್ಣ ಸೋಂಪು),ಸಕ್ಕರೆ ಕಲ್ಲು (ಧಾಗೆವಾಲಿ ಮಿಸ್ರಿ): 250 ಗ್ರಾಂ,ಗುಲ್ಕಂದ್: 3-4 ಚಮಚ,ಏಲಕ್ಕಿ: 8-10, ಕಪ್ಪು ಉಪ್ಪು: 1 ಟೀಸ್ಪೂನ್, ಸಬ್ಜಾ ಬೀಜಗಳು (ನೆನೆಸಿದ್ದು) ಮತ್ತು ಐಸ್ ಕ್ಯೂಬ್ಸ್.
ಮೊದಲು ಸೋಂಪನ್ನು 6-7 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೆನೆಸಿದ ಸೋಂಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ, ತೊಳೆದ ವೀಳ್ಯದೆಲೆಗಳನ್ನು ಸೋಂಪು ನೆನೆಸಿದ ನೀರಿನೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಸೋಂಪು ಪೇಸ್ಟ್ನೊಂದಿಗೆ ಮಿಕ್ಸ್ ಮಾಡಿ, ಸಕ್ಕರೆ ಕಲ್ಲನ್ನು (ಮಿಸ್ರಿ) ಏಲಕ್ಕಿಯೊಂದಿಗೆ ಪುಡಿ ಮಾಡಿ. ಈ ಪುಡಿ ಹಾಗೂ ಕಪ್ಪು ಉಪ್ಪನ್ನು ತಯಾರಿಸಿದ ಎಲೆಗಳ ಪೇಸ್ಟ್ಗೆ ಸೇರಿಸಿ ಚೆನ್ನಾಗಿ ಕಲಸಿ, ಮೇಲೆ ಸ್ವಲ್ಪ ಸೋಂಪು ಅಥವಾ ಗುಲ್ಕಂದ್ ಹಾಕಿ ಅಲಂಕರಿಸಿದರೆ ತಂಪಾದ ಪಾನ್ ಶರಬತ್ ಕುಡಿಯಲು ಸಿದ್ಧ. ಈ ಪಾನೀಯವು ಕೇವಲ ಬಾಯಿಗೆ ರುಚಿ ನೀಡುವುದಲ್ಲದೆ, ಜೀರ್ಣಕ್ರಿಯೆಗೂ ಸಹಕಾರಿ.

