ಪರಶುರಾಮ ಥೀಮ್ ಪಾಕ್: ವಿವಿಧ ಹಂತದ ಹೋರಾಟ, ಜನಜಾಗೃತಿಗೆ ಬಿಜೆಪಿ ನಿರ್ಧಾರ

0
10

ಕಾರ್ಕಳ: ಬೈಲೂರಿನ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಮುಂದುವರೆಯಬೇಕು, ಬಾಕಿ ಹಣ ಬಿಡುಗಡೆಗೊಳ್ಳಬೇಕು, ಕಾಂಗ್ರೆಸ್ ನಡೆಸುತ್ತಿರುವ ಸುಳ್ಳು ಅಪಪ್ರಚಾರದ ವಿರುದ್ಧ ಕಠಿಣ ಕ್ರಮ ಜರಗಿಸಬೇಕು, ಥೀಂ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ತೆರೆಯಬೇಕು ಈ ಎಲ್ಲ ಅಂಶಗಳ ಬೇಡಿಕೆ ಮುಂದಿಟ್ಟುಕೊಂಡು ಹಂತಹಂತವಾಗಿ ತಾಲೂಕು, ಜಿಲ್ಲೆ, ರಾಜ್ಯಾದ್ಯಾಂತ ನಿರಂತರ ಹೋರಾಟ, ಜನಜಾಗೃತಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾಗಿ ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳದ ವಿಕಾಸ ಕಚೇರಿಯಲ್ಲಿ ಶನಿವಾರ ನಡೆದ ಹೋರಾಟದ ರೂಪುರೇಷಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರಶುರಾಮ ಥೀಂ ಪಾರ್ಕ್  ಕುರಿತು ನಿರಂತರವಾಗಿ ಕಾಂಗ್ರೆಸ್ ನಾಯಕರು ಟೂಲ್ ಕಿಟ್ ರಾಜಕೀಯ ನಡೆಸುತ್ತ ಬಂದಿದ್ದರು. ಅವರ ನಿಜ ಬಣ್ಣ ಬಯಲಾಗಿದೆ. ಥೀಂ ಪಾರ್ಕ್ ಗೆ ತಾರ್ಕಿಕ ಅಂತ್ಯ ಹಾಕಲು ಮತ್ತು  ಕಾಂಗ್ರೆಸ್ಸಿನ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಮತ್ತು ಸಮರ್ಥ ಸಮರ ರೂಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹೋರಾಟದ ಎರಡು ಹಂತಗಳನ್ನು ತತ್ ಕ್ಷಣಕ್ಕೆ ಅವರು ಘೋಷಿಸಿದರು. ಪರಶುರಾಮ ಥೀಂ ಪಾರ್ಕ್  ಕಾಮಗಾರಿ ಮುಂದಿನ ಒಂದು ತಿಂಗಳೊಳಗೆ ಪುನರ್ ಆರಂಭವಾಗಬೇಕೆಂದು ಆಗ್ರಹಿಸಿ, ಆಗಸ್ಟ್ 6 ರಂದು  ಬೆಳಗ್ಗೆ 9.30ಕ್ಕೆ ಕಾರ್ಕಳ ಅನಂತಶಯನದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ವಾಹನ ಜಾಥಾ ನಡೆಯಲಿದೆ. ಸಹಸ್ರಾರು ವಾಹನಗಳು ಮತ್ತು ಗ್ರಾಮೀಣ ಭಾಗಗಳಿಂದ ಆಗಮಿಸುವ ಜನತೆ ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು. ಎರಡನೇ ಹಂತದಲ್ಲಿ ಥೀಂ ಪಾರ್ಕ್  ಸಾರ್ವಜನಿಕ ವೀಕ್ಷಣೆಗೆ ತೆರೆಯಬೇಕು, ಮತ್ತು ಅಪಪ್ರಚಾರ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ, ಸೆಪ್ಟೆಂಬರ್ 6 ರಂದು ಅನಂತಶಯನದಿಂದ ಬೈಲೂರಿನ ಉಮಿಕ್ಕಳ ಬೆಟ್ಟದವರೆಗೆ ಬೃಹತ್ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಸಹಸ್ರಾರು ಜನರು ಪಾಲ್ಗೊಳ್ಳಲಿದ್ದಾರೆ. ಇದರ ಮೂಲಕ ಕ್ಷೇತ್ರ ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದರು.

ಕಾಂಗ್ರೆಸ್ ನಾಯಕರು ಕಳೆದ ಎರಡು ವರ್ಷಗಳಿಂದ ಅನಾವಶ್ಯಕ ಆರೋಪ, ಸುಳ್ಳು ಹೇಳಿಕೆ, ವ್ಯಂಗ್ಯ, ಟೂಲ್ ಕಿಟ್ ರಾಜಕೀಯ ನಡೆಸುತ್ತ ಕಾಮಗಾರಿಗೆ ತಡೆಯೊಡ್ಡಿದರು. ದೂರು ಕೊಟ್ಟದ್ದು ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷರು. ಬಳಿಕ ಶಿಲ್ಪಿ ಕೆಲಸ ಮಾಡಲು ಬಂದಾಗ ತಡೆದಿದ್ದು ಕಾಂಗ್ರೆಸ್. ರಸ್ತೆಗೆ ಮಣ್ಣು ಹಾಕಿದ್ದು ಕೂಡ ಕಾಂಗ್ರೆಸ್. ಹಣ ಬಿಡುಗಡೆ ಮಾಡದಂತೆ ತಡೆದಿದ್ದು ಕಾಂಗ್ರೆಸ್. ಪ್ರತಿಭಟನೆ ಮಾಡಿದ್ದು ಕೂಡ ಅದೇ ಕಾಂಗ್ರೆಸ್. ಮುಂದಿನ ಚುನಾವಣೆ ತನಕ ಹಾಗೇಯೇ ಇರಲಿ ಅಂತ ಹೇಳಿಸಿದ್ದು, ಹೇಳಿದ್ದು ಕೂಡ ಕಾಂಗ್ರೆಸ್. ಈಗ ಆಗಬೇಕು ಎನ್ನುವುದು ಕೂಡ ಕಾಂಗ್ರೆಸ್. ಬಟ್ಟೆ ಬದಲಿಸಿದಂತೆ ಪಕ್ಷ, ನಿಲುವುಗಳನ್ನು ಬದಲಿಸುತ್ತ ಬಂದ ನಾಯಕನ ಬಂಡವಾಳ ಈಗ ಕಳಚಿ ಬಿದ್ದಿದೆ ಎಂದ ಅವರು  ಒಟ್ಟಿನಲ್ಲಿ ರಾಜಕೀಯ ಲಾಭಕ್ಕೆ ಪರಶುರಾಮನನ್ನು ಬಲಿಕೊಡಲಾಯಿತು ಎಂದರು.ಯೋಜನೆಯ ಕಾಮಗಾರಿಯೊಂದು ಇಲಾಖಾ ಹಸ್ತಾಂತರವಾಗದೆ ತನಿಖೆ ಆದ ಇತಿಹಾಸ ರಾಜ್ಯದಲ್ಲಿಲ್ಲ. ಈ ಪರಂಪರೆ ಹುಟ್ಟು ಹಾಕಿದ್ದೆ ಕಾರ್ಕಳ ಕಾಂಗ್ರೆಸ್ಸಿಗರು ಎಂದರು.

ಕಾಂಗ್ರೆಸ್ಸಿನ ಸುಳ್ಳಿನ ವಿಜೃಂಭಣೆಯಿಂದ ಜನ ಕೂಡ ಮೊದಲಿಗೆ  ನಂಬಿದ್ದರು. ನಮ್ಮ ಬಿಜೆಪಿ ಕಾರ್ಯಕರ್ತರು ಸತ್ಯ ಹೊರಬರುವ ತನಕ  ಸುಮ್ಮನಿದ್ದರು. ಆದರೆ ಖಳನಾಯಕನ ಮುಖವಾಡ ಕಳಚಿ ಬೀಳಲು ತುಂಬ ದೀನ ಬೇಕಿರಲಿಲ್ಲ. ಈಗ ನಮ್ಮ ಕಾರ್ಯಕರ್ತರು ಹಳ್ಳಿಹಳ್ಳಿಗೆ ಹೋಗಿ ಇವರ ಬಂಡವಾಳ, ನಾಟಕವನ್ನು ಬಯಲು ಮಾಡಬೇಕು. ಗಟ್ಟಿ ಧ್ವನಿಯಲ್ಲಿ ಜನರಿಗೆ ತಿಳಿಸುವ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕಾರ್ಕಳವನ್ನು ಪ್ರವಾಸಿ ತಾಣವಾಗಿ ನೋಡುವಂತಾಗಬೇಕು. ಕಾಂಗ್ರೆಸ್ಸಿನ ಸುಳ್ಳಿನ ಸರಮಾಲೆಯನ್ನು ಬಿಚ್ಚಿಡಬೇಕು ಎಂದರು.

ಬಿಜೆಪಿ ಮಾಧ್ಯಮ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪ್ಪಾಡಿ ಮಾತನಾಡಿ,ಕಾಂಗ್ರೆಸ್ ಪಕ್ಷದ ನಕಲಿ ಉದ್ಭವ ಮೂರ್ತಿ  ಉದಯಕುಮಾರ್ ಶೆಟ್ಟಿ ಮತ್ತು ಪಟಲಾಂ ಕ್ಷೇತ್ರದಲ್ಲಿ ನಡೆಸಿದ್ದ ಸುಳ್ಳಿನ ಮೆರವಣಿಗೆಯನ್ನು ಹಳ್ಳಿಯ ಜನರು  ನಂಬಿದ್ದರು. ಸುಳ್ಳುಗಳ ಸಂತೆಯಲ್ಲಿ ಕ್ಷೇತದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ದೂರದೃಷ್ಟಿಯ ಯೋಜನೆ, ಅಭಿವೃದ್ದಿಯ ಬಗ್ಗೆ ಅಪಪ್ರಚಾರ. ಜೊತೆಗೆ ಪರಶುರಾಮನ ಥೀಂ ಪಾರ್ಕ್ ಬಗ್ಗೆ ಭಾರಿ ಸುಳ್ಳು ಹೇಳಿದ್ದರು. ಕಾಂಗ್ರೆಸ್ಸಿನಿಂದ  ಪಂಚಾಯತ್ ಮಟ್ಟದಲ್ಲಿ ನಾಲ್ಕು ಮೋರಿ ಕೂಡ ನಿರ್ಮಾಣ ಆಗಿಲ್ಲ. ನಮ್ಮ ಕ್ಷೇತ್ರದ ಶಾಸಕರು ಸೈಲೆಂಟ್ ವರ್ಕರ್. ಶಬ್ದವಿಲ್ಲದೇ ಶ್ರಮಪಡುವ ನಾಯಕನಾಗಿ ಹಳ್ಳಿಯಿಂದ ಹಳ್ಳಿಗೆ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಯಾವುದೇ ಕೆಲಸವಿಲ್ಲದೆ, ಬಿರುಸಿನ ಪ್ರಚಾರಕ್ಕಷ್ಟೇ ಸೀಮಿತನಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತ್ರ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸಿದರು. ಇಂದು ಜನತೆ ಎಚ್ಚೆತ್ತುಕೊಂಡಿದ್ದಾರೆ. ಯಾರು ನಿಜವಾದ ನಾಯಕ? ಯಾರು ಕೆಲಸ ಮಾಡುತ್ತಿದ್ದಾರೆ? ಯಾರು ಕೇವಲ ಪ್ರಚಾರಕ್ಕೆ ಸೀಮಿತರಾದವರು ಎಂಬುದರ ಬಗ್ಗೆ ಜನರ ಮನಸ್ಸಿನಲ್ಲಿ ಸ್ಪಷ್ಟತೆ ಬಂದಿದೆ. ಕಾರ್ಕಳದ ಮಣ್ಣು ಮೋಸದ ಭೂಮಿಯಲ್ಲ. ಇಲ್ಲಿನ ಜನತೆ ಹೆಡ್ಡರೂ ಅಲ್ಲ. ಜಾತಿ, ಧರ್ಮ, ನೀತಿ ಆಧಾರದಲ್ಲಿ ಬಿಜೆಪಿಯನ್ನು ವಿಭಜಿಸುವ ಕಾಂಗ್ರೆಸ್ ನಾಯಕರ  ಕುಕೃತ್ಯಗಳು ಯಶಸ್ವಿಯಾಗುವುದಿಲ್ಲ. ನಾವು ಒಂದೇ ಕುಟುಂಬ, ಒಂದು ಧೋರಣೆಯೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ ಎಂದರು.

ಬಿಜೆಪಿ ಹಿರಿಯರಾದ ಬೈಲೂರಿನ ವಿಕ್ರಂ ಹೆಗ್ಡೆ ಮಾತನಾಡಿ, ಉಮಿಕ್ಕಳ ಬೆಟ್ಟಕ್ಕೆ ಹೋಗಲು ದಾರಿಯೂ ಇರಲಿಲ್ಲ. ಆ ಬೆಟ್ಟಕ್ಕೆ ಪ್ರವಾಸದೋದ್ಯಮ ಅದ್ಭುತ ಕಲ್ಪನೆಯನ್ನು ಶಾಸಕ ವಿ. ಸುನಿಲ್ ಕುಮಾರ್ ನೀಡಿದ್ದರು. ಆದರೆ ದುರಾದೃಷ್ಟ ಎಂದರೆ ಇದನ್ನು ಅರಗಿಸಿಕೊಳ್ಳದ ವಿರೋಧ ಪಕ್ಷದ ನಾಯಕರು ಇಡೀ ಯೋಜನೆಗೆ ಮಣ್ಣು ತಂದು ಹಾಕಿದರು ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ರಾಹುಲ್ ಗಾಂಧೀ ಪ್ರದಾನಿ ಆಗಲ್ಲ. ಕಾರ್ಕಳದಲ್ಲಿ ಕಾಂಗ್ರೆಸ್ ಶಾಸಕ ಆಗಲ್ಲ ಎಂದರು. ಸಭೆಯಲ್ಲಿದ್ದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯರಾಮ ಸಾಲ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಮಡಿವಾಳ,  ಬೈಲೂರು ಪರಶುರಾಮ ಥೀಂ ಪಾರ್ಕ್  ಜನಾಗ್ರಹ ಸಮಿತಿ ಅಧ್ಯಕ್ಷ ಸಚ್ಚಿದನಾಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಶಿವಪುರ ಪ್ರಸ್ತಾವನೆಗೈದರು. ಪ್ರವೀಣ್ ಸಾಲ್ಯಾನ್ ಸ್ವಾಗತಿಸಿ, ಸತೀಶ್ ಪೂಜಾರಿ ಬೋಳ ವಂದಿಸಿದರು.

  • ನವೀನ್‌ ನಾಯಕ್‌ ಕ್ಷೇತ್ರಾಧ್ಯಕ್ಷರು ಬಿಜೆಪಿ ಕಾರ್ಕಳ

LEAVE A REPLY

Please enter your comment!
Please enter your name here