ತುಳುನಾಡಿನ ಜನಪದ ಆಟಗಳು ಚಿಂತನೆ ಪ್ರಾತ್ಯಕ್ಷಿಕೆ – “ನಿನಾದ ನೆಂಪು- ಬಾಲನಿನಾದ”ಕಾರ್ಯಕ್ರಮ
ಮುಲ್ಕಿ : ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಟ್ರಸ್ಟ್, ಕಾಟಿಪಳ್ಳ ಹಾಗೂ ಪಾವಂಜೆ ನಿನಾದ – ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜನೆಯಲ್ಲಿ ತುಳುನಾಡಿನ ಜನಪದ ಆಟಗಳು ಚಿಂತನೆ ಪ್ರಾತ್ಯಕ್ಷಿಕೆ
“ನಿನಾದ ನೆಂಪು – ಬಾಲನಿನಾದ”ಕಾರ್ಯಕ್ರಮ ಪಾವಂಜೆ ನಿನಾದ ರಂಗಮಂದಿರ – ರಾಮಪ್ಪ ಪೂಜಾರಿ ಚಾವಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ ದೀಪ ಬೆಳಗಿಸಿ ಚಾಲನೆ ನೀಡಿದರು. ತುಳುನಾಡಿನ ಜನಪದ ಆಟಗಳು ಚಿಂತನೆ ಪ್ರಾತ್ಯಕ್ಷಿಕೆಯನ್ನು ಶಾಲಾ ವಿದ್ಯಾರ್ಥಿ ಪುನೀಶ್ ರವರನ್ನು ಅಡಿಕೆ ಮರದ ಸೋಗೆಯ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುವ ಮೂಲಕ ಉದ್ಘಾಟಿಸಲಾಯಿತು.
ಅಧ್ಯಕ್ಷತೆಯನ್ನು ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಪಿ. ದಯಾಕರ್ ವಹಿಸಿದ್ದರು. ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ಸಮಕಾಲಿನ ಬದುಕಿನಲ್ಲಿ ಮಕ್ಕಳ ಮನಸ್ಸು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ದಾಸರಾಗಿ ಸಂಸ್ಕಾರ ಹಾಗೂ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ, ಮಕ್ಕಳಲ್ಲಿ ಸಾಂಸ್ಕೃತಿಕವಾಗಿ ಶಾರೀರಿಕವಾಗಿ ದೈಹಿಕವಾಗಿ ಬೆಳವಣಿಗೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅವರು ಮಾತನಾಡಿ ನಮ್ಮ ಪರಂಪರೆಯ ಹಿರಿಯರ ಕಾಲದ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಜನಪದ ಆಟಗಳು ಇಂದು ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜನಪದ ವಿದ್ವಾಂಸ ಕೆ.ಕೆ. ಪೇಜಾವರ, ರವರು ತುಳುನಾಡಿನ ಜನಪದ ಆಟಗಳ ಚಿಂತನೆ ಹಾಗೂ ಪ್ರಾತ್ಯಕ್ಷಿಕೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕಡಂಬೋಡಿ ಕುಸುಮ ಮಹಾಬಲ ಪೂಜಾರಿ, , ಉದ್ಯಮಿ, ರಾಜಾರಾಮ ಸಾಲ್ಯಾನ್, ಲ.ಯಾದವ ದೇವಾಡಿಗ, ಹಳೆಯಂಗಡಿ, ಕಾರ್ಯಕ್ರಮ ಸಂಯೋಜಕ ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಗುಣವತಿ ರಮೇಶ್, ಸಾಹಿತಿ ಅನುರಾಧ ಕಡಂಬೋಡಿ, ಹಿರಿಯ ಕೃಷಿಕ ಪಾವಂಜೆ ರಮೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಡಾ ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು, ಜಯಂತಿ ಸಂಕಮಾರ್ ಧನ್ಯವಾದ ಅರ್ಪಿಸಿದರು, ಅನು- ಭವ ಸಂಕಮಾರ್ ನಿರೂಪಿಸಿದರು.
ತುಳುನಾಡಿನ ಜನಪದ ಆಟಗಳು ಚಿಂತನೆ ಪ್ರಾತ್ಯಕ್ಷಿಕೆಯನ್ನು ಶಾಲಾ ವಿದ್ಯಾರ್ಥಿ ಪುನೀಶ್ ರವರನ್ನು ಅಡಿಕೆ ಮರದ ಸೋಗೆಯ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುವ ಮೂಲಕ ಉದ್ಘಾಟಿಸಲಾಯಿತು ಬಳಿಕ ಮಕ್ಕಳಿಗೆ ಹಳೆ ಕಾಲದ ಕ್ರೀಡೆಗಳಾದ ಸರಿ ಮುಗುಳಿ, ಕಲ್ಲಾಟ, ಬೆರಿಚೆಂಡ್, ಟೊಂಕ, ಜುಬುಲಿ, ಕುಟ್ಟಿದೊನ್ನೆ, ಲಗೋರಿ, ಬಿಲ್ಲಿಸ್, ಪಾಲೆದ ಗೊಬ್ಬು, ನೇಲೆದ ಗೊಬ್ಬು, ರದ್ದು ರದ್ದು ರಾಯರ ಮಗಳು, ಗಿರ್ಗಿಟ್ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಾಯಿತು.

