ಬಂಟ್ವಾಳ:ಇಲ್ಲಿನ ಅಮ್ಟಾಡಿ ಗ್ರಾಮ ಸೇರಿದಂತೆ ಕುರಿಯಾಳ ಮತ್ತು ಪಂಜಿಕಲ್ಲು ಗ್ರಾಮ ವ್ಯಾಪ್ತಿಯ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಮುಷ್ಠಿ ಕಾಣಿಕೆ ಸಮರ್ಪಣೆ ‘ ಕಾರ್ಯಕ್ರಮ ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಇವರು ಮಾತನಾಡಿ, ‘ಇಲ್ಲಿನ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಸಲಹೆಯಂತೆ ರೂ 3 ಕೋಟಿ ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ದಾರಗೊಳ್ಳಲು ಗ್ರಾಮಸ್ಥರು ಮತ್ತು ಎಲ್ಲಾ ಭಕ್ತರ ಸಹಕಾರ ಅಗತ್ಯವಿದೆ ‘ ಎಂದರು.
ಇದೇ ವೇಳೆ ತಂತ್ರಿ ಉದಯ ಪಾಂಗಣ್ಣಾಯ ಮಾರ್ಗದರ್ಶನ ದಲ್ಲಿ ಅರ್ಚಕ ಶ್ರೀಕೃಷ್ಣ ಅರಳಿತ್ತಾಯ ಮತ್ತಿತರರು ಏಕಾದಶ ರುದ್ರಾಭಿಷೇಕ, ಗಣಪತಿ ಹವನ ನೆರವೇರಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣೇಂದ್ರ ಪೂಜಾರಿ, ಮಲ್ಲಿಕಾ ವಿ. ಶೆಟ್ಟಿ, ರಾಮಚಂದ್ರ ಸುವರ್ಣ, ಕೇಶವ ಕುಕ್ಕುರಿ, ಹರೀಶ್ ಪೆದಮಲೆ, ನಳಿನಿ ಜೆ. ಕೋಟ್ಯಾನ್, ಯುವಕ ಸಂಘದ ಅಧ್ಯಕ್ಷ ಹರೀಶ ಪೂಜಾರಿ ಮತ್ತಿತರರು ಇದ್ದರು.