ಆರ್​ಬಿಐ ನಿಗದಿತ ಗುರಿ ಸಾಧನೆಗೆ ಆದ್ಯತೆ ಅಗತ್ಯ: ನಿಶಾ ಠಾಕೂರ್​

0
1


ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳು ಆರ್ಥಿಕ ವರ್ಷದಲ್ಲಿ ಆರ್​.ಬಿ.ಐ ಮಾರ್ಗಸೂಚಿ ಅನ್ವಯ ನೀಡಿರುವ ಗುರಿಗಳನ್ನು ಸಾಧಿಸಲು ಆದ್ಯತೆ ನೀಡಬೇಕೆಂದು ಆರ್​.ಬಿ.ಐ ಎ.ಜಿ.ಎಂ. ನಿಶಾ ಠಾಕೂರ್​ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಹೆಬ್ರಿ ತಾಲೂಕಿನಲ್ಲಿ ಬ್ಯಾಂಕ್​ಗಳ ಶಾಖೆಗಳ ಸಂಖ್ಯೆ ಕಡಿಮೆ ಇದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬ್ಯಾಂಕ್​ಗಳು ಕಾರ್ಯನಿರ್ವಹಿಸುವಂತೆ ಗಮನಹರಿಸಬೇಕು. ಬ್ಯಾಂಕಿನಿಂದ ದೊರೆಯುವ ಸಾಲ, ಸಹಾಯಧನ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ ಬ್ಯಾಂಕಿಂಗ್​ ವ್ಯವಹಾರದ ವಿಸ್ತರಣೆಗೆ ಮುಂದಾಗಬೇಕು ಎಂದರು.
ಬ್ಯಾಂಕಿಂಗ್​ ಸಾಲ ಮತ್ತು ಠೇವಣಿ ಅನುಪಾತವು ಕಳೆದ ಬಾರಿ ಶೇ.48.47 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.49.54 ರಷ್ಟು ಹೆಚ್ಚಾಳವಾಗಿದ್ದು, ಶೇ. 1.07ರಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಿ.ಡಿ ಅನುಪಾತವನ್ನು ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.
ಕೆನರಾ ಬ್ಯಾಂಕ್​ ರೀಜನಲ್​ ಮ್ಯಾನೇಜರ್​ ಟಿ.ಎಸ್​. ಪೂರ್ಣಾನಂದ್​ ಮಾತನಾಡಿ, ಗ್ರಾಮಿಣ ಭಾಗದಲ್ಲಿ 239, ಸೆಮಿ ಅರ್ಬನ್​ನಲ್ಲಿ 94 ಹಾಗೂ ನಗರ ಪ್ರದೇಶಗಳಲ್ಲಿ 106 ಸೇರಿದಂತೆ ಒಟ್ಟು 439 ಬ್ಯಾಂಕ್​ ಶಾಖೆಗಳಿದ್ದು, ಒಟ್ಟಾರೆಯಾಗಿ 67,840 ಕೋಟಿ ರೂ. ಬ್ಯಾಂಕಿಂಗ್​ ವ್ಯವಹಾರ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 9.96 ರಷ್ಟು ಬ್ಯಾಂಕಿಂಗ್​ ವ್ಯವಹಾರದಲ್ಲಿ ಬೆಳವಣಿಗೆ ಸಾಧಿಸಲಾಗಿದೆ. ಬ್ಯಾಂಕ್​ಗಳು 22,475 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ. ಈ ವರ್ಷ 15,514.16 ಕೋಟಿ ರೂ. ವಾರ್ಷಿಕ ಕ್ರೆಡಿಟ್​ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈವರೆಗೆ 13,060.39 ಸಾಲ ನೀಡಲಾಗಿದೆ. ಕೃಷಿ ವಲಯಕ್ಕೆ 3429.03 ಕೋಟಿ ರೂ., ಎಂ.ಎಸ್​.ಎಂ.ಇ ವಲಯಕ್ಕೆ 3040.98, ಶಿಕ್ಷಣ ವಲಯಕ್ಕೆ 153.21 ಕೋಟಿ ರೂ., ವಸತಿ ಕ್ಷೇತ್ರಗಳಿಗೆ 174.83 ಕೋಟಿ ರೂ., ಇತರೆ ಕ್ಷೇತ್ರಗಳಿಗೆ 246.82 ಕೋಟಿ ರೂ. ವಿತರಿಸಲಾಗಿದೆ ಎಂದರು.
ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಜಿ. ಮಾತನಾಡಿ, ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 165 ಫಲಾನುಭವಿಗಳಿಗೆ 6.59 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ. ಪಿ.ಎಂ.ವಿಶ್ವಕರ್ಮ ಯೋಜನೆಯಡಿ 5865 ಅರ್ಜಿಗಳು ಸ್ವೀಕೃತವಾಗಿದ್ದು, 1345 ಅರ್ಜಿಗಳು ತಿರಸತಗೊಂಡಿವೆ. 4028 ಫಲಾನುಭವಿಗಳಿಗೆ 36.65 ಕೋಟಿ ರೂ. ಸಾಲ ವಿತರಿಸಲಾಗಿದೆ. ಪಿ.ಎಂ.ಎಫ್​.ಎಂ.ಇ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 154 ಫಲಾನುಭವಿಗಳಿಗೆ 20.53 ಕೋಟಿ ರೂ. ಹಾಗೂ ಪಿ.ಎಂ.ಎಸ್​.ಜಿ.ಎಂ.ಬಿ.ವೈ ಮೂಲಕ 444 ಫಲಾನುಭವಿಗಳಿಗೆ 9.05 ಕೋಟಿ ರೂ. ಆರ್ಥಿಕ ನೆರವನ್ನು ಮಂಜೂರು ಮಾಡಿದೆ ಎಂದರು.

ಜಿಪಂ ಯೋಜನಾ ನಿರ್ದೇಶಕ ವಿಜಯ್​ ಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ಎಸ್​.ಸಿ.ಡಿ.ಸಿ.ಸಿ ಬ್ಯಾಂಕ್​ನ ಅಸಿಸ್ಟೆಂಟ್​ ಜನರಲ್​ ಮ್ಯಾನೆಜರ್​ ರಾಜೇಶ್​ ಶೆಟ್ಟಿ, ರುಡ್​ಸೆಟ್​ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here