ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ : ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

0
22

ಬೆಂಗಳೂರು : ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ ಈಗ ‘ಮಾಸ್ಟರ್ ಪ್ಲಾನ್’ ರೂಪಿಸಿದೆ. ಇನ್ಮುಂದೆ ರೈತರು ರಸಗೊಬ್ಬರ ಪಡೆಯಲು ಕೇವಲ ಆಧಾರ್ ಕಾರ್ಡ್ ನೀಡಿದರೆ ಸಾಲದು, ಬದಲಿಗೆ ಕಡ್ಡಾಯವಾಗಿ ‘ಫ್ರೂಟ್ಸ್ ಐಡಿ’ (FID) ಹೊಂದಿರಲೇಬೇಕು.
ಮುಂಗಾರು ಹಂಗಾಮು ಆರಂಭವಾಗುತ್ತಿರುವ ಬೆನ್ನಲ್ಲೇ ಈ ಹೊಸ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದ್ದು, ಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಳೆದ ಕೆಲವು ವರ್ಷಗಳಿಂದ ರಸಗೊಬ್ಬರ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕೆಲವು ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಕಲಿ ಆಧಾರ್ ಸಂಖ್ಯೆಗಳನ್ನು ಬಳಸಿ ಅಥವಾ ರೈತರ ಹೆಸರಿನಲ್ಲಿ ದೊಡ್ಡ ಪ್ರಮಾಣದ ಗೊಬ್ಬರವನ್ನು ದಾಸ್ತಾನು ಮಾಡಿ, ಅದನ್ನು ಕೈಗಾರಿಕೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ನೈಜ ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುವಂತಾಗಿತ್ತು. ಈ ‘ರಸಗೊಬ್ಬರ ಮಾಫಿಯಾ’ಗೆ ಈಗ ಎಫ್‌ಐಡಿ (FID) ಮೂಲಕ ಕೃಷಿ ಇಲಾಖೆ ಬಲವಾದ ಕಡಿವಾಣ ಹಾಕಿದೆ.

ಈ ಹೊಸ ವ್ಯವಸ್ಥೆಯಡಿ, ರೈತರು ಗೊಬ್ಬರ ಖರೀದಿಸುವಾಗ ನೀಡುವ ಫ್ರೂಟ್ಸ್ ಐಡಿಯನ್ನು ತಂತ್ರಾಂಶದಲ್ಲಿ ಪರಿಶೀಲಿಸಲಾಗುತ್ತದೆ.

ಜಮೀನು ಆಧಾರಿತ ವಿತರಣೆ : ರೈತನ ಹೆಸರಿನಲ್ಲಿ ಎಷ್ಟು ಜಮೀನಿದೆ ಮತ್ತು ಆ ಬೆಳೆಗೆ ಎಷ್ಟು ಗೊಬ್ಬರದ ಅವಶ್ಯಕತೆ ಇದೆ ಎಂಬುದನ್ನು ಆಧರಿಸಿ ನಿಗದಿತ ಪ್ರಮಾಣದ ಗೊಬ್ಬರವನ್ನು ಮಾತ್ರ ವಿತರಿಸಲಾಗುತ್ತದೆ.

ದುರುಪಯೋಗಕ್ಕೆ ತಡೆ : ಒಬ್ಬರೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರುವುದನ್ನು ಇದು ಸಂಪೂರ್ಣವಾಗಿ ತಡೆಯುತ್ತದೆ.

ಕಟ್ಟುನಿಟ್ಟಿನ ನಿಗಾ : ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳ ಮೂಲಕ ವಿತರಣಾ ಪ್ರಕ್ರಿಯೆಯ ಮೇಲೆ ನಿರಂತರ ನಿಗಾ ವಹಿಸಲು ಸಾಧ್ಯವಾಗುತ್ತದೆ.

FRUITS ಎಂದರೆ Farmer Registration and Unified Beneficiary Information System. ಇದು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಡಿಜಿಟಲ್ ಪೋರ್ಟಲ್ ಆಗಿದ್ದು, ರಾಜ್ಯದ ಪ್ರತಿಯೊಬ್ಬ ರೈತನ ಜಮೀನಿನ ವಿವರ, ವೈಯಕ್ತಿಕ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸುತ್ತದೆ. ಇದು ರೈತರಿಗೆ ವಿಶಿಷ್ಟವಾದ FID (Farmer ID) ಸಂಖ್ಯೆಯನ್ನು ನೀಡುತ್ತದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಈ ಐಡಿ ಈಗ ಅತ್ಯಗತ್ಯ.

ಪ್ರಸ್ತುತ ರಸಗೊಬ್ಬರ ದಾಸ್ತಾನು ವಿವರ : ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಂಗಾಮಿಗೆ ಸುಮಾರು 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಇಲಾಖೆಯ ಬಳಿ 11.42 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

ರೈತರು ಎರಡು ಸುಲಭ ವಿಧಾನಗಳ ಮೂಲಕ ಫ್ರೂಟ್ಸ್ ಐಡಿ ಪಡೆಯಬಹುದು:

ನೇರ ಅರ್ಜಿ: ಅಗತ್ಯ ದಾಖಲೆಗಳ ಸಮೇತ ನಿಮ್ಮ ವ್ಯಾಪ್ತಿಯ ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಮೂಲಕ: ಅಧಿಕೃತ ವೆಬ್‌ಸೈಟ್ fruits.karnataka.gov.in ಗೆ ಭೇಟಿ ನೀಡಿ ಮೊಬೈಲ್ ಮೂಲಕವೇ ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಬೇಕಾಗುವ ದಾಖಲೆಗಳು :ಆಧಾರ್ ಕಾರ್ಡ್ ಸಂಖ್ಯೆ,ಜಮೀನಿನ ಪಹಣಿ (RTC) ವಿವರಗಳು,ಬ್ಯಾಂಕ್ ಪಾಸ್ ಬುಕ್ ಪ್ರತಿ,ಜಾತಿ ಪ್ರಮಾಣ ಪತ್ರ (ಅನ್ವಯವಾಗುವಲ್ಲಿ), ಇತ್ತೀಚಿನ ಭಾವಚಿತ್ರ.

ಮುಂಬರುವ ಮುಂಗಾರು ಹಂಗಾಮಿನಲ್ಲಿ ಯಾವುದೇ ತೊಂದರೆಯಿಲ್ಲದೆ ಸಕಾಲಕ್ಕೆ ಗೊಬ್ಬರ ಪಡೆಯಲು, ರೈತರು ಕೂಡಲೇ ತಮ್ಮ ಹೆಸರನ್ನು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಒಳ್ಳೇಯದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here