ಉಡುಪಿ: ವಾದಿರಾಜರ ವೈಭವೋತ್ಸವ ಅಂಗವಾಗಿ ಹೂವಿನಕರೆಯ 1,500 ಮನೆಗಳಲ್ಲಿ ಪ್ರಾರಂಭವಾದ ಧರ್ಮ ಜೇಂಕಾರ ಭಜನಾ ಅಭಿಯಾನವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಹಳ್ಳಿಗಳಿಗೆ ತೆರಳಿ ತಾಳ ನೀಡುವ ಸಂಕಲ್ಪ ಮಾಡಿದ್ದೇವೆ. ಈ ಮೂಲಕ ಮನೆ ಮನೆಗಳಲ್ಲಿ ವಾದಿರಾಜರ ಕೀರ್ತನೆ ಮತ್ತು ಹರಿದಾಸ ಸಾಹಿತ್ಯ ನಿರಂತರ ಮೊಳಗಬೇಕು ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಹೂವಿನಕೆರೆ ಸೋದೆ ವಾದಿರಾಜ ಮಠದಲ್ಲಿ ವಾದಿರಾಜ ವೈಭವೋತ್ಸವದಲ್ಲಿ ಶಿಷ್ಯ ಸಮೂಹದಿಂದ ಗುರುವಂದನೆ ಸ್ವೀಕರಿಸಿ ಅಶೀರ್ವಚನ ನೀಡಿದರು.
ವಾದಿರಾಜರ ಜನ್ಮಸ್ಥಳದಲ್ಲಿ ಪ್ರಥಮ ಬಾರಿಗೆ ವೈಭವವೋತ್ಸವ ಪ್ರಾರಂಭಿಸಲಾಗಿದ್ದು, ಮುಂದಿನ ವರ್ಷ ಸೋದೆಯಲ್ಲಿ ತ್ರಿವಿಕ್ರಮ ದೇವರ ಜಾತ್ರೆ ಹಾಗೂ ವಾದಿರಾಜರ ವೃಂದಾವನ ಸನ್ನಿಧಿ ಬ್ರಹ್ಮಕಲಶೋತ್ಸವ ಜತೆಗೆ ವೈಭವೋತ್ಸವ ನಡೆಯಲಿದೆ. 3 ಮತ್ತು 4ನೇ ವೈಭವೋತ್ಸವ ಶ್ರೀಕೃಷ್ಣ ಮಠದಲ್ಲಿ ಸೋದೆ ಪರ್ಯಾಯ ಸಂದರ್ಭ ಜರುಗಲಿದೆ ಎಂದರು.
ಸೋದೆ ಶ್ರೀಗಳಿಂದ ಸ್ವಾಪ್ನವೃಂದಾವನಾಖ್ಯಾನ ಮಂಗಳ ಪ್ರವಚನ ನಡೆಯಿತು. ವಿದ್ವಾನ್ ಬೆ.ನಾ.ವಿಜಯೀಂದ್ರ ಆಚಾರ್ಯ ಹಾಗೂ ಉತ್ತನೂರು ಶ್ರೀನಿಧಿ ಆಚಾರ್ಯ ಉಪನ್ಯಾಸ ನೀಡಿದರು. ವಿಜಯನಗರ ರಾಜವಂಶಸ್ಥ ಆನೆಗೊಂದಿ ಸಂಸ್ಥಾನದ ಕೃಷ್ಣದೇವರಾಯ ಮುಖ್ಯ ಅತಿಥಿಯಾಗಿದ್ದರು. ಸೋದೆ ಶ್ರೀಗಳ 35ನೇ ಜನ್ಮನಕ್ಷತ್ರ ಅಂಗವಾಗಿ ಶಿಷ್ಯವೃಂದದಿಂದ ಗುರುವಂದನೆ ನಡೆಯಿತು.

