ಮೂಡುಬಿದಿರೆ: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಪದವೀಧರ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಿ. ಹರಿಯಪ್ಪ ಭಟ್ (87) ಸೆ. 14ರಂದು ನಿಧನ ಹೊಂದಿದರು. ಪತ್ನಿ, ಪುತ್ರ, ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ್ ಭಟ್ ಹಾಗೂ ಪುತ್ರಿಯನ್ನು ಅವರು ಅಗಲಿದ್ದಾರೆ.
ಮೂಲತ: ಕಾಸರಗೋಡು ಜಿಲ್ಲೆಯ ಚೇವಾರು ಬಾಯಾಡಿಯವರಾದ ಹರಿಯಪ್ಪ ಭಟ್ಟರು ಎಂಎ, ಬಿಇಡಿ ಪದವೀಧರರಾಗಿದ್ದು ಕೇರಳದ ಧರ್ಮತಡ್ಕದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ಸುಳ್ಯದ ಆಲೆಟ್ಟಿ, ಇಚ್ಲಂಪಾಡಿ, ಬಳಿಕ ಮೂಡುಬಿದಿರೆಯ ಕಲ್ಲಬೆಟ್ಟು , ಮುಂದೆ ಮೂಡುಬಿದಿರೆ ಮೈನ್ಶಾಲೆಯೊಂದರಲ್ಲೇ 25 ವರ್ಷ ಸೇವೆ ಸಲ್ಲಿಸಿದ್ದರು. ಸಮಾಜ ಮಂದಿರದಲ್ಲಿ ತೆರೆದುಕೊಂಡ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ಮೊದಲ ಮುಖ್ಯಶಿಕ್ಷಕರಾಗಿದ್ದರು. ದರೆಗುಡ್ಡೆ ಪ್ರೌಢಶಾಲೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿ, ಮೂಡುಬಿದಿರೆ ಪುತ್ತಿಗೆ ನಿವಾಸಿಯಾಗಿದ್ದ ಅವರು ಹವ್ಯಕ ಸಮಾಜದ ಗುರಿಕಾರರೂ ಆಗಿದ್ದರು.

