ಪಂಚಾನನ ಫಿಲಂಸ್ ಬ್ಯಾನರ್ ನಡಿ ಚೊಚ್ಚಲವಾಗಿ ನಿರ್ಮಿಸಿರುವ ವಿಜಯ್ ರಾಘವೇಂದ್ರ ಅಭಿನಯಿಸಿರುವ “ರಿಪ್ಪನ್ ಸ್ವಾಮಿ” 77 ನೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬರುವ ಆಗಸ್ಟ್ 29 ರಂದು ಕರ್ನಾಟಕದಾದ್ಯಂತ ಬಿಡುಗಡೆಗೊಳ್ಳಲಿದೆ.
ವಿಶೇಷವೆಂದರೆ ವಿಭಿನ್ನ ಪ್ರಯತ್ನದ ಜೊತೆಗೆ ಒಂದೊಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ಕೊಡುವ ನಿಟ್ಟಿನಲ್ಲಿ ನಿರ್ದೇಶಕರಾದ ತುಳುನಾಡಿನ ಕಿಶೋರ್ ಮೂಡುಬಿದಿರೆ ಶ್ರಮಪಟ್ಟಿದ್ದಾರೆ. ಇದರಿಂದ ಕರಾವಳಿಗರಿಗೂ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಇತ್ತೀಚಿಗಿನ ದಿನಗಳಲ್ಲಿ ಚಿತ್ರದ ಕಥೆ ಆಯ್ಕೆಯಲ್ಲಿ ವಿಜಯ ರಾಘವೇಂದ್ರ ಬಹಳ ಚೂಸಿಯಾಗಿ ಮಾಡುತ್ತಿರುವುದು ಗಮನಾರ್ಹವಾದ ವಿಷಯ. ಅದರಲ್ಲಿ “ರಿಪ್ಪನ್ ಸ್ವಾಮಿ” ಯ ಕಥೆಯನ್ನು ನಿರ್ದೇಶಕ ಕಿಶೋರ್ ಮೂಡುಬಿದಿರೆ ನಟನಿಗೆ ಒಪ್ಪಿಸುವಲ್ಲಿ ಗೆದ್ದಿದ್ದಾರೆ. ತಾನೇ ಕಥೆ ಮತ್ತು ಚಿತ್ರಕಥೆ ಬರೆದು ಜೊತೆಗೆ ಚಿತ್ರದ ಸಂಭಾಷಣೆಯ ಜವಾಬ್ಧಾರಿಯನ್ನು ಕೂಡ ನಿರ್ದೇಶಕರಾದ ಕಿಶೋರ್ ಮೂಡುಬಿದಿರೆ ವಹಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂಬುದನ್ನು ತಿಳಿಯಬಹುದು. ಈ ಚಿತ್ರ ಕಿಶೋರ್ ಮೂಡುಬಿದಿರೆ ಮತ್ತು ವಿಜಯ ರಾಘವೇಂದ್ರರ ಜೊತೆ ಕೈ ಜೋಡಿಸಿ ಮಾಡುತ್ತಿರುವ ಎರಡನೇ ಚಿತ್ರವಾಗಿದೆ. ಆದುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಒಂದಷ್ಟು ಸಿನಿಮಾಗಳ ಸೋಲಿನ ಬಳಿಕ ವಿಜಯ್ ರಾಘವೇಂದ್ರ ಒಂದೊಳ್ಳೆಯ ಹಿಟ್ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದಂತಹ ಚಿತ್ರದ ಟೀಸರ್ ನೋಡಿದಾಗ ಈ ಚಿತ್ರ ಹೊಸಮೈಲುಗಲ್ಲು ನಿರ್ಮಿಸುವ ಎಲ್ಲಾ ಲಕ್ಷಣ ಎದುರಾಗಿದೆ. ಚಿತ್ರದ ತಾರಾಬಳಗದಲ್ಲಿ ನಾಯಕಿಯಾಗಿ ಅಶ್ವಿನಿ ಚಂದ್ರಶೇಖರ್ ಅಭಿನಯಿಸುತ್ತಿದ್ದಾರೆ. ಜೊತೆಗೆ “ರಾಂಪ”ಖ್ಯಾತಿಯ ಪ್ರಕಾಶ್ ತುಮಿನಾಡ್, ವಜ್ರಧೀರ್ ಜೈನ್, ಯಮುನ ಸನ್ನಿಧಿ, ಕೃಷ್ಣಮೂರ್ತಿ ಕತ್ತವರ್ ಮುಂತಾದ ಅನೇಕ ಕಲಾವಿದರುಗಳನ್ನು ಕಾಣಬಹುದು. ಜೊತೆಗೆ ತಂತ್ರಜ್ಞಾನದ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ರಂಗನಾಥ್ ಸಿ ಎಂ, ಸಂಗೀತ ನಿರ್ದೇಶಕರಾಗಿ ಸ್ಯಾಮ್ಯುಯೆಲ್ ಅಭಿ ಮತ್ತು ಸಂಕಲವನ್ನು ಶಶಾಂಕ್ ನಾರಾಯಣ್ ನಿರ್ವಹಿಸಿದ್ದಾರೆ.

